ಚಿಕ್ಕಬಳ್ಳಾಪುರ: ವಿದ್ಯಾರ್ಥಿಗಳು ಸಮಾಜಮುಖಿಯಾಗಿ ಚಿಂತಿಸಬೇಕು. ಉನ್ನತ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು. ನಿಮ್ಮ ಶಿಕ್ಷಣ ಮತ್ತು ಬೌದ್ಧಿಕ ಶಕ್ತಿ ಸಮಾಜಕ್ಕೆ ಅನುಕೂಲ ಆಗಬೇಕು ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ನಗರ ಹೊರವಲಯದ ಎಸ್ಜೆಸಿಐಟಿ ವಿದ್ಯಾಲಯದಲ್ಲಿ ನಡೆದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಗುರಿ ಮತ್ತು ಗುರು ಅಗತ್ಯ. ಅರ್ಜುನ ಗುರಿ ಸಾಧಿಸಲು ಶ್ರೀಕೃಷ್ಣ ಗುರುವಾಗಿ ದಾರಿ ತೋರಿದ. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಗುರಿಯನ್ನು ಹೊಂದಿರಬೇಕು. ಕಲಿಕೆಯ ಬಗ್ಗೆ ಶ್ರದ್ಧೆ ಇದ್ದರೆ ಉತ್ತಮ ಸಾಧನೆ ಸಾಧ್ಯ. ಉನ್ನತ ಮೌಲ್ಯಗಳು ವಿದ್ಯಾರ್ಥಿಗಳು ಉತ್ತಮ ದಾರಿಗೆ ಕೊಂಡೊಯ್ಯುತ್ತವೆ ಎಂದರು.
ವಿದ್ಯಾರ್ಥಿಗಳು ಸಂಸ್ಕೃತಿ ಮತ್ತು ಸಂಸ್ಕಾರದ ಜತೆಗೆ ವಿನಯವಂತಿಕೆಯನ್ನು ಮೈಗೂಡಿಸಿಕೊಳ್ಳಬೇಕು. ಮನುಷ್ಯ ತನ್ನ ತಾವು ಅರಿತು ನಡೆದಾಗ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಬಿಜಿಎಸ್ ಶಿಕ್ಷಣ ಸಂಸ್ಥೆ ಎನ್. ಶಿವರಾಮರೆಡ್ಡಿ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಬೋಧಿಸಿದರು. ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳನಾಥ ಸ್ವಾಮೀಜಿ, ನಿವೃತ್ತ ಕುಲಪತಿ ಬಿ.ಜಿ. ಸಂಗಮೇಶ್ವರ್, ಮುನಿಕೆಂಚೇಗೌಡ, ಜಿ.ಟಿ. ರಾಜು ಹಾಜರಿದ್ದರು.