ಗುಡಿಬಂಡೆ: ‘ಮಹಿಳೆಯರ ಬಗ್ಗೆ ಯಾವುದೇ ತಾತ್ಸಾರ ಮನೋಭಾವ ತೋರದೆ ಅವರಿಗೆ ಉತ್ತಮ ಶಿಕ್ಷಣ ನೀಡಿದರೆ ಪುರುಷರಂತೆ ಅವರು ಕೂಡ ಎಲ್ಲಾ ರಂಗಗಳಲ್ಲಿ ಬೆಳೆಯಲು ಸಹಕಾರಿಯಾಗಲಿದೆ’ ಎಂದು ಸಿವಿಲ್ ನ್ಯಾಯಾಧೀಶ ಆರ್. ಶಿವಕುಮಾರ ತಿಳಿಸಿದರು.
ಪಟ್ಟಣದ ನ್ಯಾಯಾಲಯದ ಮುಂಭಾಗ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲ್ಲೂಕು ಅಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ರಾಷ್ಟ್ರೀಯ ಹೆಣ್ಣು ಮಕ್ಕಳ ಹಾಗೂ ಮತದಾರರ ದಿನಾಚರಣೆ ಅಂಗವಾಗಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹೆಣ್ಣು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿದಾಗ ಸಂಸಾರದ ಪೋಷಣೆಯ ಜತೆಗೆ ಆಡಳಿತ ಹಾಗೂ ರಾಜಕೀಯ ರಂಗದಲ್ಲೂ ಸಮಾನತೆ ಬರಲಿದೆ. ಇದಕ್ಕೆ ಸಂವಿಧಾನದಲ್ಲಿ ಅವಕಾಶ ಕಲ್ಪಿಸಲಾಗಿದೆ. ಪುರುಷರಂತೆ ಮಹಿಳೆಯರು ಸಮಾನವಾಗಿ ಬೆಳೆಯಲು ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ತಿಳಿಸಿದರು.
ವಕೀಲ ಎ. ರಾಮನಾಥರೆಡ್ಡಿ ಮಾತನಾಡಿ, ಮಹಿಳೆ ಕುಟುಂಬಕ್ಕೆ ಸೀಮಿತವಾಗಿದ್ದಾಳೆ. ಆದರೆ, ಮಹಿಳೆಗೆ ಎಲ್ಲಾ ರಂಗದಲ್ಲೂ ಸ್ಥಾನಮಾನ ಪಡೆಯಲು ಕಾನೂನಿನಲ್ಲಿ ತಿದ್ದುಪಡಿ ತರಲಾಗಿದೆ. ಶಿಕ್ಷಣದ ಜತೆಗೆ ಕಾನೂನು ಅರಿವು ಪಡೆದಾಗ ಮಾತ್ರ ಉತ್ತಮ ಮಹಿಳೆಯಾಗಿ ಪುರುಷರಂತೆ ಮಹಿಳೆಯರು ಸಮಾನರಾಗಬಹುದು ಎಂದು ತಿಳಿಸಿದರು.
ವಕೀಲರ ಸಂಘದ ಉಪಾಧ್ಯಕ್ಷ ಜಿ.ಎಂ. ಅನಿಲ್ ಕುಮಾರ್, ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಫೀಕ್ ಮಾತನಾಡಿ ದರು.
ವಕೀಲರ ಸಂಘದ ಅಧ್ಯಕ್ಷ ಪಿ. ಶಿವಪ್ಪ, ಸರ್ಕಾರಿ ಅಭಿಯೋಜಕ ವಿ. ರಾಮಮೂರ್ತಿ, ವಕೀಲರಾದ ನಾರಾಯಣಸ್ವಾಮಿ, ಮಹೇಶ, ಅಂಗನವಾಡಿ ಕಾರ್ಯಕರ್ತೆಯರು ಇದ್ದರು.