ಚಿಕ್ಕಬಳ್ಳಾಪುರ: ನಗರದ ಕೋವಿಡ್ ಆಸ್ಪತ್ರೆಯಿಂದ ಶುಕ್ರವಾರ ರಾತ್ರಿ ಪರಾರಿಯಾಗಿದ್ದ ಕೋವಿಡ್ 19 ಸೋಂಕಿತ ವ್ಯಕ್ತಿಯೊಬ್ಬರು ತಾಲ್ಲೂಕಿನ ಗುಂತಪ್ಪನಹಳ್ಳಿ ಗ್ರಾಮದ ಬಳಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚಿಂತಾಮಣಿ ತಾಲ್ಲೂಕಿನ ಸೀತಾರಾಮಪುರ ಗ್ರಾಮದ ಆಂಜಿನಪ್ಪ (55) ಆತ್ಮಹತ್ಯೆ ಮಾಡಿಕೊಂಡವರು. ಕೆಲ ದಿನಗಳ ಹಿಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಆಂಜಿನಪ್ಪ ಅವರನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎನ್ನಲಾಗಿದೆ.
ಈ ವೇಳೆ ವೈದ್ಯರು ಅವರ ಗಂಟಲು ದ್ರವದ ಮಾದರಿ ಪರೀಕ್ಷೆ ನಡೆಸಿದ್ದರು. ಆಗ ಅವರಿಗೆ ಕೋವಿಡ್ ತಗುಲಿದ್ದು ತಿಳಿದು ಬಂದಿತ್ತು. ಹೀಗಾಗಿ, ಅವರನ್ನು ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
'ಶುಕ್ರವಾರ ರಾತ್ರಿ ಕೋವಿಡ್ ಆಸ್ಪತ್ರೆ ಸಿಬ್ಬಂದಿಯ ಪಾಳಿ ಬದಲಾವಣೆ ಸಂದರ್ಭದಲ್ಲಿ ಆಂಜಿನಪ್ಪ ಅವರು ಆಸ್ಪತ್ರೆಯಿಂದ ತಪ್ಪಿಸಿಕೊಂಡು ಹೋಗಿ ಗುಂತಪ್ಪನಹಳ್ಳಿ ಬಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಹಂಗಾಮಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರಮೇಶ್ ತಿಳಿಸಿದರು.
ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಗ್ಯ ಇಲಾಖೆ ಸಿಬ್ಬಂದಿ ಸೀತಾರಾಮಪುರ ಗ್ರಾಮದ ಆಂಜಿನಪ್ಪ ಅವರ ಮನೆ ಪ್ರದೇಶ ಸೀಲ್ಡೌನ್ ಮಾಡಿದ್ಧಾರೆ.