ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಸ್ಕಾಂ ನೌಕರರ ಅಮಾನತು ಹಿಂಪಡೆಯಿರಿ

ಚಿಂತಾಮಣಿ ಬೆಸ್ಕಾಂ ವಿಭಾಗೀಯ ಕಚೇರಿ ಮುಂದೆ ಲೈನ್‌ಮೆನ್‌ಗಳ ಧರಣಿ
Last Updated 8 ಜುಲೈ 2020, 9:06 IST
ಅಕ್ಷರ ಗಾತ್ರ

ಚಿಂತಾಮಣಿ: ಬೆಸ್ಕಾಂ ಕಂಪನಿಯಲ್ಲಿ ಯಾವುದೇ ನೋಟಿಸ್ ನೀಡದೆ ಲೈನ್‌ಮೆನ್‌ಗಳನ್ನು ಏಕಾಏಕಿ ಅಮಾನತು ಮಾಡಿರುವುದನ್ನು ಖಂಡಿಸಿ ಮಂಗಳವಾರ ತಾಲ್ಲೂಕಿನ ಲೈನ್‌ಮೆನ್‌ಗಳು ಬೆಸ್ಕಾಂ ವಿಭಾಗೀಯ ಕಚೇರಿ ಮುಂದೆ ಧರಣಿ ನಡೆಸಿದರು.

ಅಮಾನತು ಮಾಡಬೇಕಾದರೆ ನೌಕರರಿಗೆ ನೋಟಿಸ್ ನೀಡಿ ಉತ್ತರ ನೀಡಲು 7 ದಿನಗಳ ಕಾಲಾವಕಾಶ ನೀಡಬೇಕು. ಅವರ ಉತ್ತರ ಸಮಾಧಾನಕರವಾಗಿಲ್ಲದೇ ಇದ್ದರೆ ಅಮಾನತು ಮಾಡಬೇಕು. ಯಾವುದೇ ಪ್ರಕ್ರಿಯೆ ನಡೆಸದೆ, ನೌಕರರ ಅಹವಾಲನ್ನು ಹೇಳಿಕೊಳ್ಳಲು ಅವಕಾಶ ನೀಡದೆ ಅಮಾನತು ಪಡಿಸಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಎರಡು ದಿನಗಳ ಹಿಂದೆ ಇಬ್ಬರು ಲೈನ್‌ಮೆನ್‌ಗಳನ್ನು ಏಕಾಏಕಿ ಅಮಾನತು ಮಾಡಿದ್ದಾರೆ. ಹಿಂದೆ 4 ಜನರನ್ನು ಅಮಾನತುಪಡಿಸಿ ಒಂದು ವರ್ಷವಾಗಿದ್ದರೂ ಏನೂ ಕ್ರಮ ಜರುಗಿಸಿಲ್ಲ. ಅವರನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಎಕ್ಸಿಕ್ಯೂಟಿವ್ ಎಂಜಿನಿಯರ್ ಶ್ರೀನಾಥ್ ಮಾತನಾಡಿ, ‘ಪ್ರತಿ ಸೋಮವಾರ ಸುರಕ್ಷತಾ ಸಭೆ ನಡೆಸಿ ಸುರಕ್ಷತಾ ಕಿಟ್ ಉಪಯೋಗಿಸುತ್ತೇವೆ ಎಂದು ಪ್ರಮಾಣ ವಚನ ಮಾಡಿಸುತ್ತೇವೆ. ಕಡ್ಡಾಯವಾಗಿ ಸುರಕ್ಷತಾ ಕಿಟ್‌ಗಳನ್ನು ಬಳಸಬೇಕು ಎಂದು ಆದೇಶ ಹೊರಡಿಸಲಾಗಿದೆ. ಆದರೂ ಕೆಲವರು ಸುರಕ್ಷತಾ ಕಿಟ್ ಉಪಯೋಗಿಸುವುದಿಲ್ಲ. ತೊಂದರೆಯಾದರೆ ನಮ್ಮ ಮೇಲೆ ಕ್ರಮ ಜರುಗಿಸುತ್ತಾರೆ. ಹೀಗಾಗಿ ಸುರಕ್ಷತಾ ಕಿಟ್ ಬಳಸದವರ ವಿರುದ್ಧ ಕ್ರಮಕೈಗೊಳ್ಳಬೇಕಾಗುತ್ತದೆ’ ಎಂದು ತಿಳಿಸಿದರು.

ನೌಕರರ ಹಿತದೃಷ್ಟಿಯಿಂದ, ಅವರ ಪ್ರಾಣ ರಕ್ಷಣೆಗಾಗಿ ಎಚ್ಚರಿಸಲಾಗುತ್ತಿದೆ. ಇದರಲ್ಲಿ ಬೇರೆ ಯಾವುದೇ ಕಾರಣವಿಲ್ಲ. ನೌಕರರನ್ನು ಜಾಗೃತಗೊಳಿಸುವ ಸಲುವಾಗಿಯೇ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಅಧಿಕಾರಿಗಳು ನೌಕರರ ಸಂಘದ ಜತೆ ಮಾತುಕತೆ ನಡೆಸಿದರು. ನೌಕರರಿಗೆ ನೋಟಿಸ್ ನೀಡಿ ಅವರಿಂದ ಉತ್ತರ ಪಡೆದುಕೊಂಡು ಎಲ್ಲರ ಅಮಾನತು ಆದೇಶವನ್ನು ಹಿಂತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.

ನೌಕರರ ಸಂಘದ ಶಿವಶಂಕರ್, ರವಿಕುಮಾರ್ ಮಾತುಕತೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT