ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ | ಪ್ರಾಣಿ ಪ್ರೀತಿಯ ಎಎಸ್‌ಐಗೆ ರಾಷ್ಟ್ರಪತಿ ಪದಕದ ಗೌರವ

ಕೋತಿಗಳಲ್ಲಿ ಮಕ್ಕಳ ಪ್ರೀತಿ ಕಂಡ ನಂಜುಂಡಯ್ಯ
Last Updated 14 ಆಗಸ್ಟ್ 2020, 16:52 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸಹಾಯಕ ಸಬ್‌ಇನ್‌ಸ್ಪೆಕ್ಟರ್ (ಎಎಸ್‌ಐ) ಆಗಿ ಕಾರ್ಯ ನಿರ್ವಹಿಸುತ್ತಿರುವ ಎಚ್.ನಂಜುಂಡಯ್ಯ ಅವರಿಗೆ ಈ ಬಾರಿಯ ರಾಷ್ಟ್ರಪತಿ ಪದಕ ಲಭಿಸಿದೆ.

ತಮ್ಮ ಪ್ರಾಣಿ ಪ್ರೀತಿ, ಮಾನವೀಯತೆ ಗುಣದಿಂದಲೇ ಇಲಾಖೆಯಲ್ಲಿ ಉತ್ತಮ ಹೆಸರು ಸಂಪಾದಿಸಿರುವ ನಂಜುಂಡಯ್ಯ ಅವರು 2017ನೇ ಸಾಲಿನಲ್ಲಿ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದರು.

ಕೋತಿಗಳಲ್ಲಿ ಮಕ್ಕಳ ಪ್ರೀತಿಯನ್ನು ಕಂಡ ನಂಜುಂಡಯ್ಯ, ಅದಕ್ಕಾಗಿ ತಮ್ಮ ಸಂಬಳದಲ್ಲಿ ಮೂರ್ನಾಲ್ಕು ಸಾವಿರ ಖರ್ಚು ಮಾಡುತ್ತಿದ್ದಾರೆ.

ವಾನರ ಸಂಕುಲದ ದಾಸೋಹವನ್ನು ಬದುಕಿನ ಭಾಗವನ್ನಾಗಿ ಮಾಡಿಕೊಂಡ ಅವರಿಗೆ ಅದನ್ನು ಪೂರೈಸದಿದ್ದರೆ ಸಮಾಧಾನವಿಲ್ಲ. ಹೀಗಾಗಿ, ರಜೆ ಅಥವಾ ಪರಸ್ಥಳಗಳಿಗೆ ಹೋಗಬೇಕಾದ ಸಂದರ್ಭ ಬಂದಾಗ ಕಚೇರಿಯ ಬೀರುವಿನಲ್ಲಿ 10ರಿಂದ 15 ದೊಡ್ಡ, ದೊಡ್ಡ ಬಿಸ್ಕಿಟ್ ಪ್ಯಾಕೆಟ್‌ಗಳ ಸಂಗ್ರಹವಿಟ್ಟು, ಸಹದ್ಯೋಗಿಗಳಿಗೆ ತಮ್ಮ ‘ಕಾಯಕ’ ತಪ್ಪದೆ ನಡೆಸಿಕೊಡುವಂತೆ ಮನವಿ ಮಾಡಿಕೊಳ್ಳುತ್ತಿದ್ದರು.

ಕಿಸೆಯಲ್ಲಿ ದುಡ್ಡು ಇಲ್ಲದಿದ್ದಾಗ ಸಹದ್ಯೋಗಿಗಳ ಬಳಿ ಹಣ ಪಡೆದು ಕೋತಿಗಳಿಗೆ ಆಹಾರ ಒದಗಿಸಿ ತೃಪ್ತಿ ಪಟ್ಟುಕೊಳ್ಳುತ್ತಾರೆ. ಅನೇಕ ವರ್ಷಗಳಿಂದ ಕೋತಿ, ನಾಯಿಗಳಿಗೆ ಆಹಾರ ನೀಡುವುದನ್ನು ‘ವ್ರತ’ದಂತೆ ಪಾಲಿಸಿಕೊಂಡು ಬರುತ್ತಿದ್ದಾರೆ. ಕೆಲಸದ ಜಾಗ ಬದಲಾದರೂ ಕೋತಿಗಳೊಂದಿಗಿನ ನಂಟು ಬದಲಾಗಿಲ್ಲ. 2014ರ ಜೂನ್‌ನಲ್ಲಿ ಎಸ್ಪಿ ಕಚೇರಿ ನಗರದಿಂದ ಚದುಲಪುರ ಬಳಿ ಇರುವ ರೇಷ್ಮೆ ಇಲಾಖೆ ಕಟ್ಟಡಕ್ಕೆ ಸ್ಥಳಾಂತರಗೊಂಡ ದಿನದಿಂದ ಆರಂಭ ವಾದ ಅವರ ವಾನರ ‘ಪ್ರೇಮ’ ಇಂದಿಗೂ ಮುಂದುವರಿದುಕೊಂಡು ಬರುತ್ತಿದೆ.

ಮೊದಮೊದಲು ನಂಜುಂಡಯ್ಯ ಅವರ ಕೈ ತುತ್ತು ತಿನ್ನಲು ಹಿಂದೇಟು ಹಾಕಿದ ವಾನರ ಸಮೂಹ ಈಗ ಅವರ ಬರುವಿಕೆಗಾಗಿ ಎದುರು ನೋಡುತ್ತಿರುತ್ತವೆ. ಆರಂಭದಲ್ಲಿ ನಾಲ್ಕು ಮರಿಗಳು ಸೇರಿದಂತೆ 10 ಕೋತಿಗಳಿಗೆ ಆಹಾರ ನೀಡುತ್ತಿದ್ದರು. ಎರಡು ವರ್ಷಗಳಲ್ಲಿ ಆ ಸಂಖ್ಯೆ 30ಕ್ಕೆ ಏರಿದೆ.

ವಾನರ ಸಂಕುಲಕ್ಕೆ ನಿತ್ಯ ಬೆಳಿಗ್ಗೆ 11.30ರಿಂದ 12 ಮತ್ತು ಸಂಜೆ 4ರಿಂದ 7ರ ಒಳಗೆ ಎರಡು ಹೊತ್ತು ತಪ್ಪದೆ ಬಿಸ್ಕತ್, ಬಾಳೆಹಣ್ಣು, ಕಡಲೆಕಾಯಿ, ಬ್ರೆಡ್, ಪಪ್ಪಾಯಿ, ಕರಬೂಜ ಹೀಗೆ ಒಂದಿಲ್ಲೊಂದು ಆಹಾರದ ಜತೆಗೆ ಕುಡಿಯಲು ನೀರು ಒದಗಿಸುವರು.

ನಿಗದಿತ ಸಮಯಕ್ಕೆ ಕಚೇರಿ ಆವರಣಕ್ಕೆ ಬರುವ ಕೋತಿಗಳು ಆಹಾರ ನೀಡುವುದು ಸ್ವಲ್ಪ ತಡ ಮಾಡಿದರೂ ಮೊದಲ ಮಹಡಿಯಲ್ಲಿದ್ದ ಎಸ್ಪಿ ಕಚೇರಿ ಕಿಟಕಿಗಳ ಬಳಿ ಠಳಾಯಿಸುತ್ತಿದ್ದವು. ಆಗಲೂ ಬರದಿದ್ದಾಗ ಕಿಟಕಿಯಲ್ಲಿ ಕೈ ತೂರಿಸಿ ನಂಜುಂಡಯ್ಯ ಅವರ ಅಂಗಿ ಎಳೆದು ಆಹಾರ ನೀಡುವಂತೆ ಪೀಡಿಸುತ್ತಿದ್ದುದು ಅಚ್ಚರಿ ಮೂಡಿಸುತ್ತಿತ್ತು ಎಂದು ಅವರ ಸಹೊದ್ಯೋಗಿಗಳು ಸ್ಮರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT