ಚಿಕ್ಕಬಳ್ಳಾಪುರ: ಬಿಜೆಪಿ ಒಡ್ಡಿದ ಆಮಿಷಗಳಿಗೆ ಬಲಿಯಾಗಿ ರಾಜ್ಯದಲ್ಲಿ ಸುಭದ್ರವಾಗಿದ್ದ ಮೈತ್ರಿ ಸರ್ಕಾರವನ್ನು ಕೆಡವಿ ಉಪ ಚುನಾವಣೆಗೆ ಕಾರಣವಾಗಿರುವ ಅನರ್ಹ ಶಾಸಕರಿಗೆ ಮತದಾರರು ತಕ್ಕ ಪಾಠ ಕಲಿಸಬೇಕು ಎಂದು ಮಾಜಿ ಸಚಿವೆ ಉಮಾಶ್ರೀ ಹೇಳಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ಬುಧವಾರ ಕಾಂಗ್ರೆಸ್ ಅಭ್ಯರ್ಥಿ ನಂದಿ ಎಂ.ಅಂಜಿನಪ್ಪ ಪರ ರೋಡ್ ಶೋದಲ್ಲಿ ಮಾತನಾಡಿದರು.
‘ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಸಿದ್ದರಾಮಯ್ಯ ಅವರು ಸಾವಿರಾರು ಕೋಟಿ ಅನುದಾನ ಬಿಡುಗಡೆ ಮಾಡಿದ್ದರು. ಇದು ಜನರಿಗೆ ತಿಳಿದಿದೆ. ತಮ್ಮ ಸ್ವಾರ್ಥ ಹಿತಾಸಕ್ತಿಗಾಗಿ ಬಿಜೆಪಿಗೆ ಸೇರಿರುವ ಸುಧಾಕರ್ ಅವರಿಗೆ ಕ್ಷೇತ್ರದ ಮತದಾರರು ಬುದ್ಧಿ ಕಲಿಸಲು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಪಕ್ಷದ ಮುಖಂಡರಾದ ದೇಶಪಾಂಡೆ, ರಮೇಶ್ ಕುಮಾರ್ ಅವರು ಸಮಿಶ್ರ ಸರ್ಕಾರವನ್ನು ಕಡೆವಲು ಯಾವುದೇ ಪ್ರಯತ್ನ ಮಾಡಲಿಲ್ಲ. ಅನರ್ಹ ಶಾಸಕರ ಸ್ವಾರ್ಥವೇ ಸರ್ಕಾರ ಉರುಳಲು ಕಾರಣ ಮತದಾರರು ಗಂಭೀರವಾಗಿ ಆಲೋಚಿಸಬೇಕು ಎಂದರು.
ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ದೇಶದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದೆ. ₹ 450 ಇದ್ದ ಅಡುಗೆ ಅನಿಲ ₹ 950ಕ್ಕೆ ಏರಿಕೆಯಾಗಿದೆ. ದಿನ ಬಳಕೆ ವಸ್ತುಗಳು ತುಟ್ಟಿಯಾಗಿವೆ ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ 7 ಕೆ.ಜಿ ಅಕ್ಕಿ ನೀಡಲಾಗುತ್ತಿತ್ತು. ಬಿಜೆಪಿ ಸರ್ಕಾರ ಅದನ್ನು 3 ಕೆ.ಜಿ.ಗೆ ಇಳಿಸಿದೆ ಎಂದರು.
ಇದೇ ಸಂದರ್ಭದಲ್ಲಿ ಜಯಂತಿ ಅಂಜನಪ್ಪ, ಮಂಗಳ ಪ್ರಕಾಶ್, ಮಾಜಿ ಶಾಸಕಿ ಅನುಸೂಯಮ್ಮ, ಮಾಜಿ ಶಾಸಕ ಮುನಿಯಪ್ಪ, ಆರತಿ ಪ್ರಕಾಶ್, ಮಮತಾ ಇದ್ದರು.