ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಮಂಗಳವಾರ 59 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 2646 ಕ್ಕೆ ಏರಿಕೆಯಾಗಿದೆ.
ಕಳೆದ ವಾರ ಪ್ರತಿದಿನ ನೂರರ ಗಡಿಯಲ್ಲಿದ್ದ ಕೋವಿಡ್ 19 ಪ್ರಕರಣಗಳು ಈಗ ಇಳಿಕೆಯಾಗುತ್ತಿರುವುದರಿಂದ ಅಧಿಕಾರಿಗಳು ಮತ್ತು ನಾಗರಿಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಆದರೂ ಅಧಿಕಾರಿಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಾ ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿನ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.
ನಗರ ಮತ್ತು ಗ್ರಾಮೀಣ ಭಾಗದ ಬಹುತೇಕ ಸಾರ್ವಜನಿಕ ಸ್ಥಳಗಳು, ಸರ್ಕಾರಿ ಕಚೇರಿಗಳು, ದೇವಸ್ಥಾನ ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಬಳಕೆ ಮಾಡಿ, ನಡುವೆ ಅಂತರ ಕಾಪಾಡುವಂತೆ ಅಧಿಕಾರಿಗಳು ಜಾಗೃತಿ ಮೂಡಿಸುತ್ತಿದ್ದಾರೆ.
ಚಿಂತಾಮಣಿ: 26 ಮಂದಿಗೆ ಸೋಂಕು
ಚಿಂತಾಮಣಿ: ರ್ಯಾಪಿಡ್ ಆಂಟಿಜೆನ್ ಪರೀಕ್ಷೆ ಮತ್ತು ಆರ್ಟಿಪಿಸಿಎಲ್ ಪರೀಕ್ಷೆಯಿಂದ ನಗರದಲ್ಲಿ 15 ಹಾಗೂ ಗ್ರಾಮೀಣ ಭಾಗದಲ್ಲಿ 11 ಮಂದಿ ಸೇರಿ ಮಂಗಳವಾರ ಒಟ್ಟು 26ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ
ನಗರದ ದೊಡ್ಡಪೇಟೆಯಲ್ಲಿ 3, ಮೆಹಬೂಬ್ ನಗರದಲ್ಲಿ 2, ನಾರಸಿಂಹಪೇಟೆಯಲ್ಲಿ 1, ಕೆ.ಆರ್. ಬಡಾವಣೆಯಲ್ಲಿ 1, ಅಗ್ರಹಾರದಲ್ಲಿ 2, ವೆಂಕಟೇಶ್ವರ ಬಡಾವಣೆಯಲ್ಲಿ 2, ವೆಂಕಟಗಿರಿಕೋಟೆಯಲ್ಲಿ 1, ಅಂಜನಿ ಬಡಾವಣೆಯಲ್ಲಿ 2, ಕೆ.ಜಿ.ಎನ್ ಬಡಾವಣೆಯಲ್ಲಿ ಒಬ್ಬರಿಗೆ ಕೊರೊನಾ ಸೋಂಕು ತಗುಲಿದೆ.
ತಾಲ್ಲೂಕಿನ ಯಸಗಲಹಳ್ಳಿ 1, ಕೆಂಪದೇನಹಳ್ಳಿ 3, ಬುರುಡಗುಂಟೆ 1, ಮಡಬಹಳ್ಳಿ 2, ನೆರನಕಲ್ಲು-1, ಕೆಂದನಹಳ್ಳಿ 1, ವೈಜಕೂರು 1, ಕನಂಪಲ್ಲಿ ಒಬ್ಬರು ಸೋಂಕಿಗೆ ಒಳಗಾಗಿದ್ದಾರೆ. ತಾಲ್ಲೂಕು ಕಚೇರಿಯಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗೆ ಸೋಂಕು ಕಾಣಿಸಿಕೊಂಡಿರುವುದರಿಂದ ಕಚೇರಿಯನ್ನು 3 ದಿನ ಸೀಲ್ಡೌನ್ ಮಾಡಲಾಗಿದೆ.