ಗೌರಿಬಿದನೂರು: ತಮ್ಮ ಇಬ್ಬರು ಹೆಣ್ಣು ಮಕ್ಕಳು ಅಂತರ್ಜಾತಿ ವಿವಾಹ ಮಾಡಿಕೊಂಡಿದ್ದಕ್ಕೆ ಮನನೊಂದು ತಾಲ್ಲೂಕಿನ ತೊಂಡೇಬಾವಿ ಹೋಬಳಿಯ ಬೇವಿನಹಳ್ಳಿಯಲ್ಲಿ ಚೌಡಪ್ಪ ( 50) ಹಾಗೂ ಸುವರ್ಣಮ್ಮ (47) ದಂಪತಿ ಭಾನುವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಒಬ್ಬ ಮಗಳು ಈ ಹಿಂದೆ ಬೇರೆ ಸಮುದಾಯದ ಹುಡುಗನನ್ನು ಪ್ರೀತಿಸಿ ಮದುವೆಯಾಗಿದ್ದರು. ಆಗ ದಂಪತಿ ಸ್ಥಳೀಯರಿಂದ ಅವಹೇಳನಕ್ಕೆ ಗುರಿಯಾಗಿದ್ದರು.
ಕಳೆದ ಮೂರು ದಿನಗಳ ಹಿಂದೆ ಎರಡನೇ ಪುತ್ರಿಯೂ ತಾಲ್ಲೂಕಿನ ಕಲ್ಲಿನಾಯಕನಹಳ್ಳಿಯ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಇಬ್ಬರು ಮಕ್ಕಳು ನಮ್ಮ ಇಷ್ಟಕ್ಕೆ ವಿರುದ್ಧವಾಗಿ ಬೇರೆ ಸಮುದಾಯದವರನ್ನು ವಿವಾಹವಾಗಿದ್ದಾರೆ ಎಂದು ದಂಪತಿ ನೊಂದಿದ್ದರು. ಇದನ್ನು ಸಾಮಾಜಿಕ ಅಪಮಾನ ಎಂದು ಬಗೆದಿದ್ದರು.
ದೊಡ್ಡಬಳ್ಳಾಪುರದಲ್ಲಿ ಕೆಲಸ ಮಾಡುತ್ತಿದ್ದ ದಂಪತಿ ಸ್ವಗ್ರಾಮ ಬೇವಿನಹಳ್ಳಿಗೆ ಶನಿವಾರ ಸಂಜೆ ಬಂದಿದ್ದರು. ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.