ಶಿಡ್ಲಘಟ್ಟ: ತಾಲ್ಲೂಕಿನ ಭಕ್ತರಹಳ್ಳಿಯಲ್ಲಿ ಭಾನುವಾರ ಐದು ತಲೆಮಾರುಗಳನ್ನು ಕಂಡ ಭಕ್ತರಹಳ್ಳಿ ನಾರಾಯಣಮ್ಮ ಅವರ 96ನೇ ಜನ್ಮದಿನವನ್ನು ಕುಟುಂಬದವರೆಲ್ಲ ಒಗ್ಗೂಡಿ ಆಚರಿಸಿದರು.
ನಾವು ಹುಟ್ಟಿ ಬೆಳೆದ ಭಕ್ತರಹಳ್ಳಿಯ ನಮ್ಮ ಹಳೆಯ ಮನೆಯಲ್ಲಿ ನನ್ನಮ್ಮನ ಸುತ್ತ ರೆಂಬೆ, ಕೊಂಬೆ, ಟಿಸಿಲು ಚಿಗುರಿನಂತೆ 60 ಮಂದಿ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಸುತ್ತುವರಿದಿದ್ದೆವು. ವಿವಿಧೆಡೆ ನೆಲೆಸಿರುವ ಕುಟುಂಬದ ಸದಸ್ಯರೆಲ್ಲ ಈ ದಿನ ಒಗ್ಗೂಡಿದ್ದೆವು. ರೈತ ಮಹಿಳೆಯಾದ ನನ್ನಮ್ಮ ನಮಗೆಲ್ಲಾ ಉತ್ತಮ ಸಂಸ್ಕಾರ ಕೊಟ್ಟು ಬೆಳೆಸಿದ್ದಾರೆ. ಅಪರೂಪದ ವ್ಯಕ್ತಿತ್ವವುಳ್ಳ ನನ್ನಮ್ಮನಿಂದ ನಾನೂ ಸೇರಿದಂತೆ ಕುಟುಂಬದ 60 ಮಂದಿ ಸದಸ್ಯರೂ ಒಟ್ಟಿಗೆ ಆಶೀರ್ವಾದ ಪಡೆದಿದ್ದು ಅವಿಸ್ಮರಣೀಯ ಘಳಿಗೆ ಎಂದು ಸಂತೆ ನಾರಾಯಣಸ್ವಾಮಿ ತಿಳಿಸಿದರು.
ಸ್ವಾತಂತ್ರ್ಯ ಹೋರಾಟದ ವೇಳೆ ಸ್ವಾತಂತ್ರ್ಯ ಹೋರಾಟಗಾರರಿಗೆ ಊಟೋಪಚಾರವನ್ನು ಮಾಡುತ್ತಿದ್ದರು. ಸ್ವಾತಂತ್ರ್ಯ ಹೋರಾಟದ ಆ ದಿನಗಳನ್ನು ಕಂಡವರಲ್ಲಿ ಈಗ ಉಳಿದಿರುವವರು ನಾರಾಯಣಮ್ಮ ಅವರೊಬ್ಬರೇ. ಹೀಗಾಗಿ ಅಂದಿನ ಕಥಾವಳಿಗಳನ್ನು ಇಂದಿನ ಪೀಳಿಗೆಗೆ ಅರ್ಥವಾಗುವಂತೆ ನಾರಾಯಣಮ್ಮ ಅವರು ವಿವರಿಸುತ್ತಾರೆ.
ನನ್ನ ಅಮ್ಮ ನಾರಾಯಣಮ್ಮ ಜನಿಸಿದ್ದು 1925 ರಲ್ಲಿ. ಮೇಲೂರಿನ ಬಳಿಯ ಕಡಿಶೀಗೇನಹಳ್ಳಿಯವರಾದ ಆಕೆ 18ನೇ ವಯಸ್ಸಿಗೆ ಭಕ್ತರಹಳ್ಳಿಯ ಸಂತೇಪಾರ್ ನಾರಾಯಣಪ್ಪ ಅವರನ್ನು ವಿವಾಹವಾಗಿ ಭಕ್ತರಹಳ್ಳಿಗೆ ಬಂದರು. 2010ರಲ್ಲಿ ನನ್ನ ತಂದೆ ನಿಧನರಾದರು. ಅಮ್ಮ ಈಗ ನನ್ನ ಸಹೋದರ ಎಸ್.ಎನ್.ವೆಂಕಟೇಶ್ ಜೊತೆ ಭಕ್ತರಹಳ್ಳಿಯಲ್ಲಿ ನೆಲೆಸಿದ್ದಾರೆ. ಐದು ತಲೆಮಾರಿನ ಈ ಅಪರೂಪದ ಸಂಗಮ ಅವಿಸ್ಮರಣೀಯ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.