ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ರಾಕ್ಷಿ ಹಣ್ಣಿಗೆ ಉತ್ತಮ‌ ಬೆಲೆ: ರೈತರ ಸಂತಸ

Published 1 ಜೂನ್ 2023, 15:57 IST
Last Updated 1 ಜೂನ್ 2023, 15:57 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯು ಮೊದಲಿನಿಂದಲೂ ದ್ರಾಕ್ಷಿಗೆ ಹೆಚ್ಚು ಹೆಸರುವಾಸಿ. ಈಗ ದ್ರಾಕ್ಷಿ ಹಣ್ಣಿಗೆ ಮಾರುಕಟ್ಟೆಯಲ್ಲಿ ಬಂಪರ್ ಬೆಲೆ ಬಂದಿರುವುದರಿಂದ ಬೆಳೆಗಾರರಿಗೆ ಸಂತಸ ತಂದುಕೊಟ್ಟಿದೆ.

ಕಳೆದ ಒಂದೂವರೆ ತಿಂಗಳ ಹಿಂದೆಯಷ್ಟೇ ದ್ರಾಕ್ಷಿ ಬೆಲೆ ಪಾತಾಳಕ್ಕೆ ಕುಸಿದಿತ್ತು. ಆಗ ತೋಟಗಳಲ್ಲಿ ದ್ರಾಕ್ಷಿ ಹಣ್ಣಿನ ಕೊಯ್ಲು ಆಗದೆ ಕೊಳೆಯುತ್ತಿದ್ದವು. ಆದರೆ ಈಗ ದ್ರಾಕ್ಷಿಗೆ ಬಂಪರ್ ಬೆಲೆ ಬಂದಿರುವ ಪರಿಣಾಮ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೃಷ್ಣಾ, ಶರತ್, ಸೊನೆಕಾ, ಸೂಪರ್ ಸೊನೆಕಾ, ರೆಡ್ ಗ್ಲೋಬ್, ದಿಲ್‍ಖುಷ್, ಅನಾಭಿಶ್, ಕಾಬೂಲ್, ಕಪ್ಪುದ್ರಾಕ್ಷಿ (ಬೆಂಗಳೂರು ಬ್ಲೂ) ಹೀಗೆ ವಿವಿಧ ತಳಿಯ ದ್ರಾಕ್ಷಿಯನ್ನು ರೈತರು ಬೆಳೆಯುತ್ತಾರೆ. ಅದರಲ್ಲೂ ರಾಜ್ಯದಲ್ಲಿ ದ್ರಾಕ್ಷಿ ಬೆಳೆಯುವುದರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ 2 ನೇ ಸ್ಥಾನ ಪಡೆದಿರುವುದು ವಿಶೇಷವಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಕೋವಿಡ್, ಭಾರಿ ಮಳೆ, ಬೇಡಿಕೆ ಕುಸಿತ ಸೇರಿದಂತೆ ನಾನಾ ಕಾರಣಗಳಿಂದ ಮಾರುಕಟ್ಟೆಯಲ್ಲಿ ದ್ರಾಕ್ಷಿ ಹಣ್ಣಿಗೆ ಹೇಳಿಕೊಳ್ಳುವಂತಹ ಬೆಲೆ ಸಿಕ್ಕಿರಲಿಲ್ಲ. ದ್ರಾಕ್ಷಿ ಬೆಳೆಗೆ ಹಾಕಿದ ಬಂಡವಾಳ ಬಾರದೆ ಬೆಳೆಗಾರರು ಸತತವಾಗಿ ನಷ್ಟದ ಹಾದಿ ಹಿಡಿದು ಕೈ ತುಂಬಾ ಸಾಲ ಮಾಡಿ ಕೈ ಸುಟ್ಟುಕೊಂಡಿದ್ದರು. ಈಗ ದ್ರಾಕ್ಷಿಗೆ ಉತ್ತಮ ಬೆಲೆ ಸಿಕ್ಕಿರುವುದರಿಂದ ಬೆಳೆಗಾರರು ಆರ್ಥಿಕವಾಗಿ ಚೇತರಿಸಿಕೊಳ್ಳುವಂತಾಗಿದೆ.

ಜಿಲ್ಲೆಯಲ್ಲಿ ಒಣ ಹವೆಯಿಂದಾಗಿ ತಾಜಾ ಹಣ್ಣಿಗೆ ಬೇಡಿಕೆ ಇದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಬಂದಿದ್ದು, ಕೊಯ್ಲಿಗೆ ಸಿದ್ಧಗೊಂಡಿರುವ ದ್ರಾಕ್ಷಿಯನ್ನು ಉತ್ತರಪ್ರದೇಶ, ಅಸ್ಸಾಂ, ದೆಹಲಿ, ಓರಿಸ್ಸಾ, ತಮಿಳುನಾಡು, ಕೇರಳ ಸೇರಿದಂತೆ ಹಲವು ರಾಜ್ಯಗಳಿಗೆ ರಫ್ತಾಗುತ್ತಿದ್ದು, ವ್ಯಾಪಾರಸ್ಥರು ಜಿಲ್ಲೆಯಲ್ಲಿಯೇ ಠಿಕಾಣಿ ಹೂಡಿದ್ದಾರೆ.

ಕಳೆದ ಒಂದೂವರೆ ತಿಂಗಳ ಹಿಂದೆ ವಿವಿಧ ತಳಿ ದ್ರಾಕ್ಷಿ ಕೆ.ಜಿ ಗೆ ₹6 ನಿಂದ ಅಧಿಕವೆಂದರೆ ₹50 ವರೆಗೆ ದರ ಇತ್ತು. ಆಗ ಕಪ್ಪುದ್ರಾಕ್ಷಿ ಹಣ್ಣನ್ನು ಖರೀದಿಸುವವರೇ ಇರಲಿಲ್ಲ. ಆದರೆ ಕಳೆದ ಒಂದು ವಾರದಿಂದ ವಿವಿಧ ತಳಿಯ ದ್ರಾಕ್ಷಿ ಹಣ್ಣಿನ ಬೆಲೆಯಲ್ಲಿ ಏರಿಕೆ ಕಂಡು ಬಂದಿರುವುದರಿಂದ ದ್ರಾಕ್ಷಿ ಹಣ್ಣು ಕೊಯ್ಲಿಗೆ ಸಿದ್ಧಗೊಂಡಿರುವ ಬೆಳೆಗಾರರಿಗೆ ಅದೃಷ್ಟ ಒಲಿದಿದೆ.

ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ದಿಲ್ ಖುಷ್, ಕಪ್ಪುದ್ರಾಕ್ಷಿ, ಕೃಷ್ಣಾಶರತ್, ರೆಡ್‍ಗ್ಲೋಬ್ ತಳಿಯ ದ್ರಾಕ್ಷಿಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ಪ್ರಸ್ತುತ ದಿಲ್ ಖುಷ್ ₹60, ಕಪ್ಪು ದ್ರಾಕ್ಷಿ ₹45, ಕೃಷ್ಣಾ ಶರತ್ ₹80- 120, ರೆಡ್ ಗ್ಲೋಬ್ ₹100 ನಂತೆ ಬೆಳೆಗಾರರ ತೋಟಗಳಲ್ಲಿ ವ್ಯಾಪಾರಸ್ಥರು ಖರೀದಿಸುತ್ತಿದ್ದಾರೆ.

ಪ್ರಸ್ತುತ ದ್ರಾಕ್ಷಿ ಹಣ್ಣಿಗೆ ಬೇಡಿಕೆ ಹೆಚ್ಚಾಗಿರುವ ಪರಿಣಾಮ ಮಾರುಕಟ್ಟೆಯಲ್ಲಿ ದ್ರಾಕ್ಷಿ ಹಣ್ಣಿನ ಬೆಲೆಯಲ್ಲಿ ಹೆಚ್ಚಳವಾಗಿದೆ. ಬಿಸಿಲಿನ ತಾಪ ಹೆಚ್ಚಳ, ಈ ಸೀಸನ್‍ನಲ್ಲಿ ದ್ರಾಕ್ಷಿ ಹಣ್ಣಿನ ಫಸಲಿನ ಇಳುವರಿ ಕುಂಠಿತವಾಗಿರುವುದು, ಮಾವಿನ ಹಣ್ಣಿಗೆ ಆಲಿಕಲ್ಲು ಹೊಡೆತ ಬಿದ್ದಿರುವುದು ಸೇರಿದಂತೆ ನಾನಾ ಕಾರಣಗಳಿಂದ ದ್ರಾಕ್ಷಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಬರಲು ಕಾರಣ ಎನ್ನುತ್ತಾರೆ ದ್ರಾಕ್ಷಿ ಬೆಳೆಗಾರರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT