ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ ಹಿಂಪಡೆಯಲು ಏಜೆಂಟರ ಆಗ್ರಹ

ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಒಕ್ಕೂಟದ ಚಿಕ್ಕಬಳ್ಳಾಪುರ ಶಾಖೆ ವತಿಯಿಂದ ವಿಮಾ ಪ್ರತಿನಿಧಿಗಳ ಶೈಕ್ಷಣಿಕ ಸಮಾವೇಶ
Last Updated 24 ಜುಲೈ 2019, 14:20 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಪ್ರೀಮಿಯಂ ಮೇಲೆ ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಹೇರಿರುವುದು ಅಮಾನವೀಯ. ಈ ಕೂಡಲೇ ಇಂತಹ ಜನವಿರೋಧಿ ತೆರಿಗೆಯನ್ನು ಹಿಂಪಡೆಯಬೇಕು’ ಎಂದು ಅಖಿಲ ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ಸಿಂಗಾರಪು ಶ್ರೀನಿವಾಸ್ ಆಗ್ರಹಿಸಿದರು.

ನಗರದಲ್ಲಿ ಮಂಗಳವಾರ ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಒಕ್ಕೂಟದ ಚಿಕ್ಕಬಳ್ಳಾಪುರ ಶಾಖೆ ವತಿಯಿಂದ ಆಯೋಜಿಸಿದ್ದ ವಿಮಾ ಪ್ರತಿನಿಧಿಗಳ ಶೈಕ್ಷಣಿಕ ಸಮಾವೇಶ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೇಂದ್ರದ ಈ ನಿರ್ಧಾರದಿಂದ ಕಮಿಷನ್‌ಗೆ ಹೊಡೆತ ಬಿದ್ದು ಜೀವ ವಿಮಾ ಪ್ರತಿನಿಧಿಗಳ ಜೀವನ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ. ಕಳೆದ 60 ವರ್ಷಗಳಿಂದಲೂ ಎಲ್‌ಐಸಿ ಏಜೆಂಟರ್ ಕಮಿಷನ ಹೆಚ್ಚಳ ಮಾಡಿಲ್ಲ. ಸರ್ಕಾರ ಕನಿಷ್ಠ ಕೂಲಿ ₹18 ಸಾವಿರ ವೇತನ ಮಿತಿ ನಿಗದಿಪಡಿಸಲಾಗಿದೆ. ಆದರೆ, ಕಮಿಷನ್ ನೆಚ್ಚಿಕೊಂಡು ಜೀವನ ನಡೆಸುತ್ತಿರುವ ಏಜೆಂಟರಿಗೆ ಕನಿಷ್ಠ ಕೂಲಿ ಕೂಡ ಸಿಗದಂತಹ ಸನ್ನಿವೇಶ ಸೃಷ್ಟಿಯಾಗಿದೆ’ ಎಂದು ಹೇಳಿದರು.

‘ಕಳೆದ 4 ವರ್ಷಗಳಿಂದ ಪಾಲಸಿಗಳ ಸಂಖ್ಯೆ ಕಡಿಮೆಯಾಗುತ್ತಿರುವ ಬಗ್ಗೆ ನಿಗಮ ಆತಂಕ ವ್ಯಕ್ತಪಡಿಸಿದೆ. ಇದು ಕಮೀಷನ್ ಹೆಚ್ಚಳಕ್ಕೂ ಅಡ್ಡಿಯಾಗಿದೆ. ಇದರಿಂದ ಏಜೆಂಟರು ಗ್ರಾಮೀಣ ಭಾಗದಲ್ಲಿನ ಹೆಚ್ಚಿನ ಜನರಿಗೆ ಹೊಸ ಯೋಜನೆ ಮತ್ತು ಅನುಕೂಲಗಳ ಬಗ್ಗೆ ಸಮರ್ಪಕ ಮಾಹಿತಿ ಒದಗಿಸಬೇಕು’ ಎಂದರು.

‘ಎಲ್‌ಐಸಿ ಪ್ರೀಮಿಯಂ ಮೇಲಿನ ಜಿಎಸ್‌ಟಿ ತೆರವುಗೊಳಿಸಬೇಕು. ಕೇಂದ್ರ ಸರ್ಕಾರವು ಈ ಕೂಡಲೇ ಎಲ್‌ಐಸಿ ಪ್ರತಿನಿಧಿಗಳ ಪಿಂಚಣಿಯನ್ನು ₹ 10 ಲಕ್ಷಕ್ಕೆ ಏರಿಸಬೇಕು. ಉಚಿತ ಆರೋಗ್ಯ ವಿಮೆ ಜಾರಿಗೊಳಿಸಬೇಕು. ಅಲ್ಲದೇ ಪ್ರತಿನಿಧಿಗಳ ಬೇಡಿಕೆಗಳ ಈಡೇರಿಕೆಗೆ ಸಕರಾತ್ಮಕವಾಗಿ ಸ್ಪಂದಿಸಬೇಕು. ಈ ಕುರಿತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುತ್ತದೆ’ ಎಂದು ತಿಳಿಸಿದರು.

‘ವಿಮಾ ಪ್ರತಿನಿಧಿಗಳ ಒಕ್ಕೂಟ ಪಾಲಸಿದಾರರ ಹಿತವನ್ನು ಕಾಪಾಡುವಲ್ಲಿ ಬದ್ಧವಾಗಿದೆ. ಸದಸ್ಯರು ಒಕ್ಕೂಟಕ್ಕೆ ಶಕ್ತಿ ತುಂಬಲು ಹೊಸ ಸದಸ್ಯರಿಗೆ ಸದಸ್ಯತ್ವವನ್ನು ನೀಡಬೇಕು. ಒಕ್ಕೂಟದಿಂದ ಕಾಲ ಕಾಲಕ್ಕೆ ಸೂಕ್ತ ಮಾರ್ಗದರ್ಶನ ನೀಡುವ ಜತೆಗೆ ಅಗತ್ಯ ಸವಲತ್ತುಗಳನ್ನು ಒದಗಿಸಲಾಗುತ್ತದೆ. ಇಂದು ಸರ್ಕಾರದಿಂದ ಒಕ್ಕೂಟ ಸವಲತ್ತು ಪಡೆಯಬೇಕಾದರೆ ಪ್ರತಿಯೊಬ್ಬರು ಸಂಘಟಿತರಾಗಬೇಕು’ ಎಂದರು.

ಅಖಿಲ ಭಾರತ ಜೀವ ವಿಮಾ ಪ್ರತಿನಿಧಿಗಳ ಒಕ್ಕೂಟದ ಕಲ್ಯಾಣ ಸಮಿತಿ ಅಧ್ಯಕ್ಷ ಸಿ.ಜಿ.ಲೋಕೇಂದ್ರ ಮಾತನಾಡಿ, ‘ವಿಮಾ ಪ್ರತಿನಿಧಿಗಳ ಒಕ್ಕೂಟದಿಂದ ಪ್ರತಿನಿಧಿ ಮಿತ್ರರಿಗೆ ಸಿಗುವ ಸೌಲಭ್ಯಗಳು, ಹಕ್ಕು ಬಾಧ್ಯತೆಗಳು, ಕುಂದುಕೊರತೆ, ವೈಧ್ಯಕೀಯ ಸೌಲಭ್ಯ, ಗ್ರಾಚ್ಯುಟಿ, ಗುಂಪು ವಿಮೆ ಕುರಿತು ಸರ್ಕಾರದ ಗಮನ ಸೆಳೆಯಲು ಸದಸ್ಯರು ಭಿನ್ನಾಭಿಪ್ರಾಯ ಮರೆತು ಹೋರಾಟಕ್ಕೆ ಬೆಂಬಲ ನೀಡಬೇಕು’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಒಕ್ಕೂಟದ ವಿಮಾ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು. ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಒಕ್ಕೂಟದ ಗೌರವಾಧ್ಯಕ್ಷ ಎಸ್.ಬಿ.ಶ್ರೀನಿವಾಸಚಾರಿ, ವಲಯ ಕಾರ್ಯದರ್ಶಿ ಡಿ.ರಾಮಚಂದ್ರ, ವಿಭಾಗೀಯ ಅಧ್ಯಕ್ಷ ವಿ.ರವೀಂದ್ರನಾಥ್, ಕಾರ್ಯದರ್ಶಿ ವಿರೂಪಾಕ್ಷಪ್ಪ, ಒಕ್ಕೂಟದ ಚಿಕ್ಕಬಳ್ಳಾಪುರ ಶಾಖೆ ಅಧ್ಯಕ್ಷ ಎಂ.ಸೋಮಶೇಖರ್, ಗೌರವಾಧ್ಯಕ್ಷ ಸಿ.ಎಸ್.ನಾರಾಯಣ, ಕಾರ್ಯದರ್ಶಿ ಎನ್.ಮೋಹನ್ ಬಾಬು, ಖಜಾಂಚಿ ಎ.ಎನ್.ರಮೇಶ್ ಗುಪ್ತಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT