ಮಂಚೇನಹಳ್ಳಿ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ಅರುಣಾ ಕುಮಾರಿ ಅವರು ಮಂಗಳವಾರ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅವ್ಯವಸ್ಥೆಗಳನ್ನು ಗಮನಿಸಿ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಆರೋಗ್ಯ ಕೇಂದ್ರದ ಕೆಲಸ ಮಾಡುವ ಅಧಿಕಾರಿಗಳ ಮತ್ತು ಸಿಬ್ಬಂದಿ ಹಾಜರಾತಿ ಪರಿಶೀಲಿಸಿದರು. ಕೆಲ ಅಧಿಕಾರಿಗಳು, ಸಿಬ್ಬಂದಿ ಗೈರು ಹಾಜರಾಗಿರುವುದನ್ನು ಗಮನಿಸಿದರು. ಆರೋಗ್ಯ ಸೇವೆಗಳು ಜನರಿಗೆ ಸಮರ್ಪಕವಾಗಿ ತಲುಪುತ್ತಿಲ್ಲದಿರುವ ಬಗ್ಗೆ ತಿಳಿದುಕೊಂಡರು. ಕೂಡಲೇ ವ್ಯವಸ್ಥೆ ಸರಿಪಡಿಸುವಂತೆ ಸೂಚಿಸಿದರು.
ಆಸ್ಪತ್ರೆಯಲ್ಲಿ ಕಸ ಮತ್ತು ಪ್ಲಾಸ್ಟಿಕ್ ರಾಶಿ ಕಂಡು ಬೇಸರ ವ್ಯಕ್ತಪಡಿಸಿದರು. ರೋಗಿಗಳು ಔಷಧಿಗಳನ್ನು ಖರೀದಿಸಲು ಖಾಸಗಿ ಮೆಡಿಕಲ್ ಸ್ಟೋರ್ ಗಳಿಗೆ ಶಿಫಾರಸ್ಸು ಮಾಡುವುದನ್ನು ನಿಲ್ಲಿಸಬೇಕು. ಆಸ್ಪತ್ರೆಯಲ್ಲಿ ಕನಿಷ್ಠ ಮಟ್ಟದ ಸ್ವಚ್ಛತೆ ಕಾಪಾಡಬೇಕು. ಬಯೊಮೆಡಿಕಲ್ ತ್ಯಾಜ್ಯ ವಿಲೇವಾರಿ, ಪ್ಲಾಸ್ಟಿಕ್ ವಿಲೇವಾರಿ, ಶೌಚಾಲಯದ ವ್ಯವಸ್ಥೆ ಇಲ್ಲದಿರುವ ಬಗ್ಗೆ ತುರ್ತು ಕ್ರಮಕೈಗೊಳ್ಳಲು ಸಂಬಂಧಪಟ್ಟ ಸ್ಥಳೀಯಾಡಳಿತದ ಮುಖ್ಯಸ್ಥರು ಹಾಗೂ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಆರೋಗ್ಯ ಸೇವೆಗಳನ್ನು ಸಂಬಂಧಪಟ್ಟ ಸಕ್ಷಮ ಅಧಿಕಾರಿಗಳು ಮತ್ತು ದಾದಿಯರು ನೀಡಬೇಕು. ಬದಲಾಗಿ ‘ಡಿ’ ದರ್ಜೆ ನೌಕರರು ಆರೋಗ್ಯ ಸೇವೆಗಳನ್ನು ನೀಡಬಾರದು. ಇಲ್ಲಿನ ಎಲ್ಲಾ ಪರಿಸ್ಥಿತಿಗಳನ್ನು ತುರ್ತಾಗಿ ಸರಿಪಡಿಸಬೇಕು ಎಂದು ನಿರ್ದೇಶನ ನೀಡಿದರು.
ಈ ವೇಳೆ ಆಸ್ಪತ್ರೆಗೆ ಅಗತ್ಯ ಮೂಲ ಸೌಲಭ್ಯಗಳನ್ನು ಹಾಗೂ ಸಿಬ್ಬಂದಿ ಒದಗಿಸುವಂತೆ ಕೋರಿದರೂ ಅಗತ್ಯ ಸ್ಪಂದನೆ ದೊರೆತಿಲ್ಲ ಎಂದು ವೈದ್ಯಾಧಿಕಾರಿ ನ್ಯಾಯಾಧೀಶರ ಗಮನಕ್ಕೆ ತಂದರು.
ತಹಶೀಲ್ದಾರ್ ವೆಂಕಟೇಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾರಾಯಣಸ್ವಾಮಿ, ವೈದ್ಯರಾದ ಡಾ.ನವೀನ್, ವಕೀಲರಾದ ಮಂಜುನಾಥರೆಡ್ಡಿ, ಸೌಜನ್ಯಗಾಂಧಿ ಪಾಲ್ಗೊಂಡಿದ್ದರು.