ಚಿಕ್ಕಬಳ್ಳಾಪುರ: ‘ಬಿಜೆಪಿಯವರು ನೋಟಿಸ್ ಕೊಟ್ಟು ನಮ್ಮ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ಅವರಿಗೆ ಗಂಡಸ್ತನ ಇದ್ದರೆ ನ್ಯಾಯಾಲಯಕ್ಕೆ ಹೋಗಲಿ. ಅವ್ಯವಹಾರ ಹೇಗಾಗಿದೆ ಎಂದು ನಾವು ಅಲ್ಲಿ ಸಾಬೀತು ಮಾಡುತ್ತೇವೆ’ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾವು ಮಾಡುವ ಆರೋಪಗಳಿಗೆ ಉತ್ತರ ಕೊಡಲಾಗದೆ ಬಿಜೆಪಿಯವರು ವಕೀಲರ ಮೂಲಕ ನೋಟಿಸ್ ಕೊಡಿಸುವುದು ನೋಡಿದರೆ ಪರೋಕ್ಷವಾಗಿ ತಪ್ಪನ್ನು ಒಪ್ಪಿಕೊಂಡಂತಾಗಿದೆ’ ಎಂದು ಅಭಿಪ್ರಾಯಪಟ್ಟರು.
‘ಧೈರ್ಯವಿದ್ದರೆ ಕಾಂಗ್ರೆಸ್ನವರು ಆರೋಪ ಮಾಡುತ್ತಿರುವುದು ಸುಳ್ಳು ಎಂದು ನ್ಯಾಯಾಲಯಕ್ಕೆ ಹೋಗಲಿ. ಅಲ್ಲಿ ನಾವು ನಮ್ಮ ಬಳಿ ಇರುವ ದಾಖಲೆಗಳನ್ನು ಕೊಡುತ್ತೇವೆ. ಅವರೂ ದಾಖಲೆಗಳನ್ನು ನೀಡಲಿ. ನ್ಯಾಯಾಲಯಕ್ಕೆ ಪ್ರಧಾನಮಂತ್ರಿ ಅವರು ಬಂದು ಪಿಎಂ ಕೇರ್ ನಿಧಿಯ ಲೆಕ್ಕ ಕೊಡಲಿ’ ಎಂದು ಸವಾಲು ಹಾಕಿದರು.