ಗುಡಿಬಂಡೆ: ‘ಆರ್ಥಿಕವಾಗಿ ದುರ್ಬಲರಾದವರು ಕಾನೂನು ಪ್ರಾಧಿಕಾರದಿಂದ ಉಚಿತವಾಗಿ ಕಾನೂನಿನ ನೆರವು ಹಾಗೂ ಅರಿವು ಪಡೆದುಕೊಳ್ಳಬಹುದು’ ಎಂದು ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶ ಆರ್. ಶಿವಕುಮಾರ್ ಹೇಳಿದರು.
ಪಟ್ಟಣದ ನ್ಯಾಯಾಲಯದಲ್ಲಿ ಕಾನೂನು ಸೇವಾ ಪ್ರಾಧಿಕಾರ ಹಾಗೂ ವಕೀಲರ ಸಂಘದಿಂದ ನಡೆದ ರಾಷ್ಟ್ರೀಯ ಕಾನೂನು ಸೇವಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಕಾನೂನು ನೆರವು ಮತ್ತು ಅರಿವು ಪಡೆಯುವವರು ಪ್ರಾಧಿಕಾರದಿಂದ ನೇಮಿಸಿರುವ ವಕೀಲರನ್ನು ಸಂಪರ್ಕಿಸಬೇಕು. ವಕೀಲರಿಗೂ ಹಾಗೂ ನ್ಯಾಯಾಲಯಕ್ಕೆ ಯಾವುದೇ ಶುಲ್ಕ ಪಾವತಿಸದೆ ಕಾನೂನು ಹೋರಾಟ ಮಾಡಬಹುದು ಎಂದು ತಿಳಿಸಿದರು.
ವಕೀಲ ಎಸ್.ವಿ. ನಂದೀಶ್ವರ ರೆಡ್ಡಿ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪಂಗಡ, ಅಂಗವಿಕಲರು, ಮಹಿಳೆಯರು, ₹ 1 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿದವರು ಉಚಿತವಾಗಿ ಕಾನೂನಿನ ನೆರವು ಪಡೆದುಕೊಳ್ಳಬಹುದು ಎಂದು ಹೇಳಿದರು.
ಎಪಿಪಿ ವಿ. ರಾಮಮೂರ್ತಿ, ವಕೀಲರ ಸಂಘದ ಅಧ್ಯಕ್ಷ ಪಿ.ಶಿವಪ್ಪ, ವಕೀಲರಾದ ನಾರಾಯಣಸ್ವಾಮಿ, ರಾಮನಾಥ ರೆಡ್ಡಿ, ಶಿವಾನಂದರೆಡ್ಡಿ, ಎ. ಗಂಗಾಧರಪ್ಪ, ಟಿ.ಸಿ. ಅಶ್ವಥರೆಡ್ಡಿ, ಎನ್. ನರಸಿಂಹಪ್ಪ, ಕೆ.ಎಲ್. ಮಂಜುನಾಥ, ಕಾನೂನು ಸೇವಾ ಸಮಿತಿಯ ಸುರೇಶ ಹಾಜರಿದ್ದರು.