ಚಿಕ್ಕಬಳ್ಳಾಪುರ: ಮಾಜಿ ಪ್ರಿಯಕರನ ಮೇಲೆ ಹಲ್ಲೆ ನಡೆಸಿ ₹21 ಲಕ್ಷ ಹಣ ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಪೊದ್ದಟೂರಿನ ಭಾವನಾ ರೆಡ್ಡಿ ಮತ್ತು ಅನಂತಪುರದ ಪುಲ್ಲಾರೆಡ್ಡಿ ಎಂಬುವವರನ್ನು ನಂದಿಗಿರಿಧಾಮ ಠಾಣೆ ಪೊಲೀಸರು ಹುಬ್ಬಳ್ಳಿಯಲ್ಲಿ ಭಾನುವಾರ ಬಂಧಿಸಿದ್ದಾರೆ.
ತಾಲ್ಲೂಕಿನ ಅಂಗಟ್ಟ ಬಳಿಯ ವಿಲ್ಲಾವೊಂದರಲ್ಲಿ ಜೂನ್ 16ರಂದು ಹಲ್ಲೆ ಪ್ರಕರಣ ಜರುಗಿತ್ತು. ಹಲ್ಲೆಗೆ ಒಳಗಾದ ವಿಜಯ್ ಸಿಂಗ್ ಈ ಬಗ್ಗೆ ನಂದಿಗಿರಿಧಾಮ ಠಾಣೆಯಲ್ಲಿ ದೂರು ದಾಖಲಿಸಿದ್ದರು. ವಿಜಯ್
ಸಿಂಗ್ ಮತ್ತು ಪುಲ್ಲಾರೆಡ್ಡಿ ಸ್ನೇಹಿತರಾಗಿದ್ದರು.
ಭಾವನಾ ರೆಡ್ಡಿ ಮತ್ತು ವಿಜಯ್ ಸಿಂಗ್ ಹಿಂದೆ ಪ್ರೀತಿಸುತ್ತಿದ್ದರು. ಈ ವಿಚಾರವನ್ನು ವಿಜಯ್ ಸಿಂಗ್, ಭಾವನಾ ತಂದೆಗೂ ತಿಳಿಸಿದ್ದರು. ಆದರೆ ಇತ್ತೀಚೆಗೆ ಈ ಇಬ್ಬರು ಪ್ರೇಮಿಗಳ ನಡುವೆ ಮನಸ್ತಾಪವಿತ್ತು.
ಜೂನ್ 16ರಂದು ಪುಲ್ಲಾರೆಡ್ಡಿ ಕರೆ ಮಾಡಿ ಪಾರ್ಟಿ ಮಾಡೋಣ ಎಂದಿದ್ದನು. ಅಂಗಟ್ಟ ಬಳಿಯ ವಿಲ್ಲಾವೊಂದರಲ್ಲಿ ಎಲ್ಲರೂ ಸೇರಿದ್ದೆವು. ಈ ವೇಳೆ ಪುಲ್ಲಾರೆಡ್ಡಿ ಮತ್ತು ಆತನ ಸಹಚರರಾದ ಸುಬ್ರಮಣಿ, ಸಿದ್ದೇಶ್, ಸುಧೀರ್ ನನ್ನ ಮೇಲೆ ಹಲ್ಲೆ ನಡೆಸಿದ್ದರು. ವಿಡಿಯೊ ಕರೆ ಮಾಡಿ ಹಲ್ಲೆ ನಡೆಸುವುದನ್ನು ಭಾವನಾ ರೆಡ್ಡಿಗೂ ತೋರಿಸಿದ್ದರು ಎಂದು ದೂರಿನಲ್ಲಿ ವಿಜಯ್ ಸಿಂಗ್ ವಿವರಿಸಿದ್ದರು.
ಮರು ದಿನ ಸ್ಥಳಕ್ಕೆ ಬಂದ ಭಾವನಾ ರೆಡ್ಡಿ, ₹30 ಲಕ್ಷ ನೀಡಿದರೆ ಸುಮ್ಮನಿರುವುದಾಗಿ ತಿಳಿಸಿದರು. ತನ್ನ ಖಾತೆಯಲ್ಲಿದ್ದ ₹8 ಲಕ್ಷ ಹಾಗೂ ಲೋನ್ ಆ್ಯಪ್ ಮೂಲಕ ₹13 ಲಕ್ಷ ಸಾಲ ಪಡೆದು ಭಾವನಾ ಹೇಳಿದವರಿಗೆ ವರ್ಗಾಯಿಸಿದೆ. ಎರಡು ಮೊಬೈಲ್, ಲ್ಯಾಪ್ಟಾಪ್, ₹4 ಸಾವಿರ ನಗದು ಸಹ ಕಸಿದುಕೊಂಡರು ಎಂದು ವಿಜಯ್ ಸಿಂಗ್ ದೂರಿನಲ್ಲಿ ತಿಳಿಸಿದ್ದರು.
ವಿಜಯ್ ಸಿಂಗ್ಗೆ, ಪುಲ್ಲಾರೆಡ್ಡಿಯ ಪತ್ನಿಯ ಜೊತೆ ಸಲುಗೆ ಇತ್ತು. ಇದು ಸಹ ಪರಸ್ಪರ ವೈಷ್ಯಮ್ಯಕ್ಕೆ ಕಾರಣ. ಎಲ್ಲ ಆಯಾಮದಿಂದ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇವರ ನಡುವೆ ಪರಸ್ಪರ ದ್ವೇಷವಿತ್ತು. ಪ್ರಕರಣ ಸಂಬಂಧ ಹುಬ್ಬಳ್ಳಿಯಲ್ಲಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆ ನಂತರ ಹೆಚ್ಚಿನ ಮಾಹಿತಿ ತಿಳಿಯಲಿದೆ.ಡಿ.ಎಲ್.ನಾಗೇಶ್ ಎಸ್ಪಿ ಚಿಕ್ಕಬಳ್ಳಾಪುರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.