ಚಿಕ್ಕಬಳ್ಳಾಪುರ: ‘ಹಗಲು-ರಾತ್ರಿ ಎನ್ನದೇ ಪ್ರಾಣದ ಹಂಗು ತೊರೆದು ದೇಶ ಕಾಯುವ ವೀರ ಯೋಧರ ಸೇವೆ, ಬಲಿದಾನವನ್ನು ಪ್ರತಿಯೊಬ್ಬರೂ ಸ್ಮರಿಸಬೇಕು’ ಎಂದು ಯುವ ಬ್ರಿಗೇಡ್ ಜಿಲ್ಲಾ ಸಂಚಾಲಕ ಅಭಿಲಾಷ್ ಸೋಮೇನಹಳ್ಳಿ ತಿಳಿಸಿದರು.
ನಗರದ ಪಂಚಗಿರಿ ಬೋಧನಾ ಪ್ರೌಢಶಾಲೆಯಲ್ಲಿ ಯುವ ಬ್ರಿಗೇಡ್ ಸಂಘಟನೆ ವತಿಯಿಂದ ಆಯೋಜಿಸಿದ್ದ ಹುತಾತ್ಮ ಯೋಧರ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ವಿದ್ಯಾರ್ಥಿಗಳು ದೇಶ ಪ್ರೇಮದ ಕಾಳಜಿ ಹಾಗೂ ಆದರ್ಶಗಳನ್ನು ಪಾಲಿಸಬೇಕು. ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದು 100 ವರ್ಷ ಕಳೆದಿದೆ. ಕಾರ್ಗಿಲ್ ಯುದ್ಧ ನಡೆದು 20 ವರ್ಷಗಳಾಗಿವೆ. ಆದರೆ ಅವುಗಳಲ್ಲಿ ಮಡಿದ ಯೋಧರ ದೇಶಭಕ್ತಿ ಮತ್ತು ತ್ಯಾಗ, ಬಲಿದಾನ ದೇಶವಾಸಿಗಳು ಎಷ್ಟು ನೆನಪಿಸಿಕೊಂಡರೂ ಕಡಿಮೆಯೆ’ ಎಂದರು.
‘ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರ ಸೈನಿಕರ ನೆನಪು ಎಂದಿಗೂ ಮಾಸುವುದಿಲ್ಲ. ಸೈನಿಕರು ತಮ್ಮ ಮನೆ, ಕುಟುಂಬದವನ್ನು ತೊರೆದು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುತ್ತಾರೆ. ಅದಕ್ಕೆ ಬದಲಾಗಿ ನಾವು ಅವರ ತ್ಯಾಗವನ್ನಾದರೂ ಸ್ಮರಿಸುವ, ದೇಶ ಪ್ರೇಮ ಎತ್ತಿ ಹಿಡಿಯುವ ಕೆಲಸವನ್ನಾದರೂ ಮಾಡಬೇಕು’ ಎಂದು ಹೇಳಿದರು.
ಪರಿಸರ ಪ್ರೇಮಿ ಗುಂಪುಮರದ ಆನಂದ್ ಮಾತನಾಡಿ, ರಾಷ್ಟ್ರ ರಕ್ಷಣೆಯ ವಿಷಯದಲ್ಲಿ ಯಾರೂ ಹಿಂಜರಿಯಬಾರದು. ಇವತ್ತು ಪ್ರತಿಯೊಂದು ಕುಟುಂಬದಿಂದಲೂ ಸೇನೆಗೆ ಒಬ್ಬೊಬ್ಬರು ಸೇರಲು ಸಿದ್ಧರಾಗಬೇಕು. ಇಂದಿನ ವಿದ್ಯಾರ್ಥಿಗಳು ನಮ್ಮ ದೇಶದ ಚರಿತ್ರೆಯನ್ನು ತಿಳಿದುಕೊಂಡು ರಾಷ್ಟ್ರ ರಕ್ಷಣೆಗೆ ಮುಂದಾಗಬೇಕು. ದೇಶ ಸೇವೆ ಮಾಡಿ ಸಮಾಜದಲ್ಲಿ ಉತ್ತಮ ಹೆಸರು ಗಳಿಸಬೇಕು’ ಎಂದು ತಿಳಿಸಿದರು.
ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. ಗುಡಿಬಂಡೆ ಅರಣ್ಯ ಇಲಾಖೆ ಅಧಿಕಾರಿ ಉಲಗಪ್ಪ, ಶಾಲೆಯ ಟ್ರಸ್ಟ್ ವ್ಯವಸ್ಥಾಪಕ ಕೆ.ಆರ್.ಲಕ್ಷ್ಮಣ್ಸ್ವಾಮಿ, ಶಿಕ್ಷಕರಾದ ಶ್ರೀನಿವಾಸ ಮೂರ್ತಿ, ಪ್ರತಿಭಾ, ಜಯಶಂಕರ್, ಮುನಿರಾಜು, ನರಸಿಂಹಮೂರ್ತಿ, ಮುರಳಿ, ಮನೋಹರ್, ಮಂಜುಳಾ, ಶಿವಣ್ಣ ಇದ್ದರು.