ಚಿಕ್ಕಬಳ್ಳಾಪುರ: ತಾಲ್ಲೂಕಿನ ನಂದಿಗಿರಿಧಾಮದಲ್ಲಿ ಬೆಟ್ಟ ಏರುವಾಗ ಆಯತಪ್ಪಿ ಬಿದ್ದ ನಿಶಾಂಕ್ (19) ಎಂಬುವವರನ್ನು ರಕ್ಷಿಸಲಾಗಿದೆ.ನವದೆಹಲಿ ಮೂಲದ ನಿಶಾಂಕ್ ಬೆಂಗಳೂರಿನ ಪಿಇಎಸ್ ವಿಶ್ವವಿದ್ಯಾಲಯದಲ್ಲಿ ಮೊದಲ ವರ್ಷದ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು.
ನಂದಿಗಿರಿಧಾಮಕ್ಕೆ ವಾರಾಂತ್ಯದಲ್ಲಿ ಪ್ರವಾಸಿಗರ ಭೇಟಿ ನಿರ್ಬಂಧಿಸಲಾಗಿದೆ. ನಿಶಾಂಕ್ ಬೈಕ್ನಲ್ಲಿ ಗಿರಿಧಾಮಕ್ಕೆ ಬಂದಿದ್ದಾರೆ. ಬೆಟ್ಟದ ಚೆಕ್ಪೋಸ್ಟ್ ಬಳಿ ಬೈಕ್ ನಿಲ್ಲಿಸಿದ್ದಾರೆ. ಅಲ್ಲಿಂದ ಬ್ರಹ್ಮಗಿರಿ ಬೆಟ್ಟದ ಮೂಲಕ ನಂದಿಗಿರಿಧಾಮ ಏರಲು ಮುಂದಾಗಿದ್ದಾರೆ.ಈ ವೇಳೆ ಆಯತಪ್ಪಿ ಬಿದ್ದಿದ್ದಾರೆ.
ಬೆಟ್ಟದಿಂದ ಸುಮಾರು 250 ಅಡಿ ಆಳ ಕೆಳಕ್ಕೆ ಬಿದ್ದಿದ್ದಾರೆ. ಈ ವೇಳೆ ಅಲ್ಲಿ ಸ್ವಲ್ಪ ಮಟ್ಟಿನ ಆಧಾರ ದೊರೆತಿದೆ. ಅವರು ಸಿಲುಕಿದ್ದ ಸ್ಥಳದಿಂದ ಮತ್ತೆ ಕೆಳಗೆ 300 ಅಡಿಗಳ ಕಂದಕವಿತ್ತು.
ರಾಜ್ಯ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, ಅರಣ್ಯ ಇಲಾಖೆ ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿದರು. ಭಾರತೀಯ ವಾಯುಸೇನೆಯ ಹೆಲಿಕಾಪ್ಟರ್ ಮೂಲಕ ನಿಶಾಂಕ್ ಅವರನ್ನು ರಕ್ಷಿಸಲಾಯಿತು.ಗಾಯಗೊಂಡಿದ್ದ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜೀವ ಉಳಿಸಿದ ಮೊಬೈಲ್: ಕಲ್ಲಿನ ಪೊಟರೆಯಲ್ಲಿ ಸಿಲುಕಿದ್ದ ಅವರು ಅಲ್ಲಿಂದಲೇ ದೆಹಲಿಯಲ್ಲಿರುವ ಪೋಷಕರಿಗೆ ಮೊಬೈಲ್ ಮೂಲಕ ಕರೆ ಮಾಡಿ ವಿಷಯ ತಿಳಿಸಿದರು. ಪೋಷಕರು ಕರ್ನಾಟಕ ಸರ್ಕಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗೆ ವಿಷಯ ತಿಳಿಸಿ, ಮಗನನ್ನು ರಕ್ಷಿಸುವಂತೆ ಕೋರಿದರು.