ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರಕಗಳಿಗೆ ಬೇಕಿದೆ ಕಾಯಕಲ್ಪ

ಶಿಡ್ಲಘಟ್ಟ: ರಕ್ಷಣೆ ಇಲ್ಲದ ‘ಕ್ಷೌರದ ಬಂಡೆ’, ನಿರ್ಮಾತೃ ಶಿವನೇಗೌಡ, ಪತ್ನಿಯ ಸಮಾಧಿ
Last Updated 7 ಏಪ್ರಿಲ್ 2021, 4:56 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಶಿಡ್ಲಘಟ್ಟದ ಇತಿಹಾಸವನ್ನು ಸುಮಾರು ಐನೂರು ವರ್ಷಗಳ ಹಿಂದಿನವರೆಗೂ ಕರೆದೊಯ್ಯುವ ಎರಡು ಸ್ಮಾರಕಗಳು ನಗರದಲ್ಲಿವೆ. ಅವುಗಳನ್ನು ಉಳಿಸಿಕೊಂಡು ಫಲಕ ಹಾಕಿ ಅವುಗಳ ಕುರಿತಾಗಿ ಇಂದಿನ ಮತ್ತು ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಕೆಲಸ ಆಗಬೇಕಿದೆ.

ಪಟ್ಟಣಕ್ಕೆ 495 ವರ್ಷಗಳ ಸುದೀರ್ಘ ಇತಿಹಾಸವಿದೆ. ಈ ಊರನ್ನು ಕಟ್ಟಿದ್ದು ವೀರಮಹಿಳೆ ಹಲಸೂರಮ್ಮ ಎಂಬುದು ಇತಿಹಾಸದಲ್ಲಿ ದಾಖಲಾಗಿರುವುದು ತಿಳಿದಾಗ ಸ್ತ್ರೀ ಕುಲದ ಬಗ್ಗೆ ಇರುವ ಗೌರವ ಇಮ್ಮಡಿಯಾಗುತ್ತದೆ.

ಇಲ್ಲಿನ ಕೋಟೆ ವೃತ್ತದ ಸರ್ಕಾರಿ ಶಾಲೆಯ ಆವರಣದಲ್ಲಿ ಅಪರೂಪದ ‘ಕ್ಷೌರದ ಬಂಡೆ’ ಇದ್ದರೆ, ಅಮ್ಮನಕೆರೆಯ ಅಚ್ಚುಕಟ್ಟಿನಲ್ಲಿ ಶಿಡ್ಲಘಟ್ಟದ ನಿರ್ಮಾತೃ ಹಲಸೂರಮ್ಮನ ಮಗ ಶಿವನೇಗೌಡ ಮತ್ತು ಆತನ ಪತ್ನಿಯ ಸಮಾಧಿಗಳಿವೆ. ಈ ಎರಡಕ್ಕೂ ಮಾಹಿತಿ ಫಲಕಗಳೊಂದಿಗೆ ಕಾಯಕಲ್ಪದ ಅಗತ್ಯವಿದೆ.

ಶಿಡ್ಲಘಟ್ಟದ ಪುರಾತನ ಹೆಸರು ‘ಸಿಡ್ಲಘಟ್ಟ’. ಸ್ಥಳ ಐತಿಹ್ಯದ ಪ್ರಕಾರ ವೆಲ್ಲೂರಿನ ಕದನದಲ್ಲಿ ನಿಧನನಾದ ಉಜ್ಜನಿ ಮೂಲದ ಕೆಂಪೇಗೌಡನ ಗರ್ಭಿಣಿ ಮಡದಿ ಹಲಸೂರಮ್ಮ ಅಬ್ಲೂಡಿನಲ್ಲಿ ಕೋಟೆ ಕಟ್ಟಿ, ಸುತ್ತಮುತ್ತಲಿನ ಪ್ರದೇಶವನ್ನು ಆಕ್ರಮಿಸಿಕೊಂಡು ಆಳತೊಡಗಿದಳು. ಕ್ರಿ.ಶ 1526ರಲ್ಲಿ ವ್ಯವಸ್ಥಿತವಾಗಿ ಕೋಟೆ ಮತ್ತು ಊರನ್ನು ಕಟ್ಟಿಸಿದ ಹಲಸೂರಮ್ಮ ತನ್ನ ಮಾವನಾದ ಸಿಡ್ಲೇಗೌಡನ ಹೆಸರಿನಿಂದ ‘ಸಿಡ್ಲ ಘಟ್ಟ’ ಎಂದು ಕರೆದಳು. ಶಿವನೇಗೌಡನನ್ನು 1529ರಲ್ಲಿ ಪಟ್ಟದ ಮೇಲೆ ಕೂರಿಸಿದಳು. ಶಿವನೇಗೌಡ 47 ವರ್ಷಗಳ ಕಾಲ ಈ ಊರನ್ನು ಆಳಿದನು.

ಈ ನಗರದ ನೈರುತ್ಯಕ್ಕಿರುವ ‘ಅಮ್ಮನಕೆರೆ’ಯನ್ನು ಹಲಸೂರಮ್ಮ, ಆಗ್ನೇಯಕ್ಕಿರುವ ‘ಗೌಡನಕೆರೆ’ಯನ್ನು ಶಿವನೇಗೌಡ ಕಟ್ಟಿಸಿದರೆಂದು ಪ್ರತೀತಿ ಇದೆ. ಅಮ್ಮನಕೆರೆಯ ಅಚ್ಚುಕಟ್ಟಿನಲ್ಲಿರುವ ಚಾವಣಿಗೆ ಹೊದಿಸಿರುವ ಸಮಾಧಿಗಳು ಶಿವನೇಗೌಡ ಮತ್ತು ಆತನ ಪತ್ನಿಯದು.0

ಶಿಡ್ಲಘಟ್ಟವನ್ನು ಸುಮಾರು 47 ವರ್ಷಗಳ ಕಾಲ ಆಳ್ವಿಕೆ ನಡೆಸಿದ ಶಿವನೇಗೌಡ ಕೂತು ಕ್ಷೌರ ಮಾಡಿಸಿಕೊಳ್ಳುತ್ತಿದ್ದ ಎಂದೇ ಪ್ರಸಿದ್ಧವಾದ ‘ಕ್ಷೌರದ ಬಂಡೆ’ ನಗರದ ಕೋಟೆ ವೃತ್ತದ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮರಗಳ ಕೆಳಗೆ ನೆಲಹಾಸಿನಂತೆ ಅಗೋಚರವಾಗಿ ಉಳಿದಿದೆ. ನೋಡಲು ಹಾಸು ಚಪ್ಪಡಿಯಂತೆ ಕಾಣಿಸುತ್ತದೆ. ಸುಮಾರು ಐದು ಅಡಿ ಉದ್ದ ಹಾಗೂ ಅಗಲದ ಮತ್ತು ಎರಡು ಅಡಿಗೂ ಮೀರಿದ ದಪ್ಪದ ಈ ಬಂಡೆಯು ನಗರದ ಕೋಟೆ ವೃತ್ತದಲ್ಲಿ ಈ ಹಿಂದೆ ಇದ್ದ ಸರ್ಕಾರಿ ಶಾಲೆಯ ಆವರಣದಲ್ಲಿ ಎತ್ತರದ ಕಲ್ಲಿನ ಮೇಲೆ ಕೂರಿಸಲಾಗಿತ್ತು.

ಈ ಭಾಗದಲ್ಲಿ ಆತ ಕಟ್ಟಿಸಿದ್ದ ಕೋಟೆಯ ಆವರಣದಲ್ಲಿ ತನ್ನ ವಾಸದ ಮನೆ (ಅರಮನೆ) ಬಳಿಯ ಈ ಸ್ಥಳದಲ್ಲಿ ಶಿಡ್ಲಘಟ್ಟ ಪಾಳೆಪಟ್ಟಿನ ನಾಯಕ ಶಿವನೇಗೌಡ ಕೂರುತ್ತಿದ್ದ ಹಾಗೂ ಕ್ಷೌರ ಮಾಡಿಸಿಕೊಳ್ಳುತ್ತಿದ್ದ ಎಂಬುದಾಗಿ ಹಿರಿಯರು ಹೇಳುತ್ತಿದ್ದರು.

ಕೋಟೆ ವೃತ್ತದಲ್ಲಿನ ಸರ್ಕಾರಿ ಶಾಲೆಯನ್ನು ಅಭಿವೃದ್ಧಿಪಡಿಸಿ ಹೊಸ ಕಟ್ಟಡವನ್ನು ನಿರ್ಮಾಣ
ಮಾಡುವಾಗ ಈ ಕ್ಷೌರದ ಬಂಡೆಯನ್ನು ಸ್ಥಳಾಂತರಿಸಿ ಕಟ್ಟಡದ ಮುಂದಿನ ಖಾಲಿ ಸ್ಥಳದಲ್ಲಿ ಹಾಕಲಾಯಿತು. ಅದು ಈಗ ನೆಲದ ಮೇಲೆ ಹಾಸುವ ಕಲ್ಲು ಚಪ್ಪಡಿಯಂತೆ ಮಣ್ಣಿನಲ್ಲಿ ಸೇರಿಕೊಂಡಿದೆ. ಸುತ್ತ ಮರದ ಎಲೆಗಳು ರೆಂಬೆಗಳು ಬಿದ್ದಿದ್ದು, ನೆಲದಲ್ಲಿ ಸೇರಿಹೋಗುವ ಹಾದಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT