ಶಿಡ್ಲಘಟ್ಟ: ತಾಲ್ಲೂಕಿನ ತಾದೂರು ಗ್ರಾಮದ ರೇಷ್ಮೆ ಸಾಕಾಣಿಕೆ ಮನೆಯೊಂದರಲ್ಲಿ ನಕಲಿ ಮದ್ಯ ತಯಾರಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಭಾನುವಾರ ಮುಂಜಾನೆ ದಾಳಿ ನಡೆಸಿದ ಅಬಕಾರಿ ಇಲಾಖೆಯ ಸಿಬ್ಬಂದಿ ₹ 10 ಲಕ್ಷ ಮೌಲ್ಯದ ನಕಲಿ ಮದ್ಯ, ಮದ್ಯಸಾರ, ಬಾಟಲಿ ಹಾಗೂ ಮುಚ್ಚಳಗಳನ್ನು ವಶಪಡಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ಟಿ.ಎಂ. ಮಂಜುನಾಥ್ ಬಂಧಿತ. ಅಬಕಾರಿ ಉಪ ಆಯುಕ್ತ ಜಿ.ಪಿ. ನರೇಂದ್ರಕುಮಾರ್ ನೇತೃತ್ವದ ಅಬಕಾರಿ ಇಲಾಖೆಯ ಸಿಬ್ಬಂದಿ ನಕಲಿ ಮದ್ಯ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿದ್ದಾರೆ. 1,290 ಲೀಟರ್ ಸ್ಪಿರಿಟ್ ಸೇರಿದಂತೆ 62 ಲೀಟರ್ ಬ್ಲೆಂಡ್, 32 ಕೆ.ಜಿಯಷ್ಟು ಕ್ಯಾಪ್, ಲೇಬಲ್ ಹಾಗೂ ತಯಾರಿಸಿಟ್ಟಿದ್ದ 37.800 ಲೀಟರ್ನಷ್ಟು ನಕಲಿ ಮದ್ಯ ವಶಪಡಿಸಿಕೊಂಡಿದ್ದಾರೆ.