ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರವ ತಬ್ಬಿದ ಟಬೂಬಿಯಾ

ಹೂಗಳ ಋತುವಿನ ಪ್ರಾರಂಭ ಸಾರಿದ ದಕ್ಷಿಣ ಅಮೆರಿಕ ಮೂಲದ ಮರ
Last Updated 16 ನವೆಂಬರ್ 2020, 4:57 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಒಂದು ಶತಮಾನಕ್ಕೂ ಮುಂಚೆ ಭಾರತಕ್ಕೆ ಬಂದ ದಕ್ಷಿಣ ಅಮೆರಿಕ ಮೂಲದ ಟಬೂಬಿಯಾ ಜಾತಿಯ ಮರಗಳು ಈಗ ಭಾರತದ್ದೇ ಆಗಿಹೋಗಿವೆ. ಸರಣಿ ಹೂ ಬಿಡುವ ಮರಗಳೆಂದೇ ಇವನ್ನು ಬಣ್ಣಿಸಲಾಗಿದೆ. ಟಬೂಬಿಯಾ ಮರಗಳು ಹಲವು ಬಗೆಗಳಲ್ಲಿದ್ದು, ಕೆಲವು ತಿಂಗಳಿನಲ್ಲಿ ಸುಂದರ ಬಣ್ಣ ಬಣ್ಣದ ಹೂವನ್ನು ಅರಳಿಸಿ ಪ್ರಕೃತಿಗೆ ಮೆರುಗು ತರುತ್ತವೆ. ಈ ಹೂಗಳು ಮರಗಳ ಕೆಳಗೆ ಉದುರಿದಾಗ ಸುಂದರ ಕಾರ್ಪೆಟ್ ಹಾಸಿದಂತೆ ಕಾಣುತ್ತದೆ.

ಟಬೂಬಿಯಾ ಅವಲಾನಿಡೇ ಮರಗಳು ನವೆಂಬರ್ ತಿಂಗಳಿನಲ್ಲಿ ಮೊಟ್ಟಮೊದಲು ಗಾಢವಾದ ಗುಲಾಬಿ ಬಣ್ಣದ ಹೂಗಳನ್ನು ಅರಳಿಸಿ ಹೂಗಳ ಋತುವಿನ ಪ್ರಾರಂಭವನ್ನು ಸಾರುತ್ತವೆ. ತಾಲ್ಲೂಕಿನ ವಿವಿಧೆಡೆ ಈ ಹೂಗಳ ಮರಗಳಿವೆ. ಭಕ್ತರಹಳ್ಳಿಯಲ್ಲಿ ಈ ಹೂಗಳ ಮೆರುಗನ್ನು ಇದೀಗ ನಾವು ಕಾಣಬಹುದಾಗಿದೆ.

‘1908ರಲ್ಲಿ ಲಾಲ್‌ಬಾಗ್‌ ಕ್ಯುರೇಟರ್‌ ಆಗಿ ಬಂದವರು ಕ್ರುಂಬಿಗಲ್‌. ಅವರು ಲಾಲ್‌ಬಾಗ್‌ಗೆ ಸೀಮಿತವಾಗಿದ್ದ ಉದ್ಯಾನವನ್ನು ನಗರದ ವಿವಿಧ ಬಡಾವಣೆಗಳಿಗೆ, ಮನೆಗಳಿಗೆ ಕೊಂಡೊಯ್ದರು. ಅವರು ಸರಣಿ ಹೂ ಬಿಡುವ ಮರಗಳನ್ನು ನೆಡುವುದನ್ನು ಪ್ರಾರಂಭಿಸಿದರು. ಅಂದರೆ ಒಂದು ಜಾತಿಯ ಮರಗಳು ಹೂವರಳಿಸಿ ಬಾಡುವಷ್ಟರಲ್ಲಿ ಮತ್ತೊಂದು ಜಾತಿಯ ಮರಗಳು ಹೂವರಳಿಸಿರಬೇಕು. ಅವರು ಈ ಟಬೂಬಿಯಾ ಜಾತಿಯ ಮರಗಳನ್ನು ಸಾಕಷ್ಟು ನೆಡಲು ಪ್ರೋತ್ಸಾಹಿಸಿದರು. ನನ್ನ ಹುಟ್ಟೂರು ಭಕ್ತರಹಳ್ಳಿಯಲ್ಲಿ ಎರಡು ದಶಕಗಳ ಹಿಂದೆ ಟಬೂಬಿಯಾ ಅವಲಾನಿಡೇ ಗಿಡಗಳನ್ನು ನಾನೇ ನೆಟ್ಟಿದ್ದೆ. ಸಾಧ್ಯವಾದ ಕಡೆಗಳಲ್ಲೆಲ್ಲಾ ಈ ಜಾತಿಯ ಮರಗಳ ಬೀಜಗಳನ್ನು ಹಾಕುತ್ತಿರುತ್ತೇನೆ’ ಎಂದು ತೋಟಗಾರಿಕೆ ಸಮಾಲೋಚಕ ತಜ್ಞ ಭಕ್ತರಹಳ್ಳಿಯ ಸಂತೆ ನಾರಾಯಣಸ್ವಾಮಿ ತಿಳಿಸಿದರು.

‘ಟಬೂಬಿಯಾ ಅವಲಾನಿಡೇ ಜಾತಿಯ ಮರ ನವೆಂಬರ್, ಡಿಸೆಂಬರ್, ಜನವರಿ ತಿಂಗಳಿನಲ್ಲಿ ಗಾಢವಾದ ಗುಲಾಬಿ ಬಣ್ಣದ ಹೂಬಿಡುತ್ತದೆ. ಅದು ಮುಗಿಯುವಷ್ಟರಲ್ಲಿ ಟಬೂಬಿಯಾ ಅರ್ಜೆನ್ಷಿಯಾ ಗಾಢ ಹಳದಿ ಬಣ್ಣದ ಹೂವರಳಿಸಿಕೊಂಡು ಗಮನಸೆಳೆದರೆ, ಟಬೂಬಿಯಾ ಸ್ಪೆಕ್ಟಾಬಿಲಿಸ್ ತಿಳಿ ಹಳದಿ ಹೂವರಳಿಸುತ್ತವೆ’ ಎಂದು ವಿವರಿಸುತ್ತಾರೆ.

‘ಇವು ಫೆಬ್ರುವರಿ, ಮಾರ್ಚ್ ತಿಂಗಳಿನಲ್ಲಿ ಇರುತ್ತವೆ. ಹಳದಿ ಹೂಗಳು ಉದುರುವ ಸಮಯಕ್ಕೆ ಸರಿಯಾಗಿ ಅಂದರೆ, ಯುಗಾದಿಗೆ ಸ್ವಾಗತ ಕೋರುವುದೇ ಟಬೂಬಿಯಾ ರೋಸಿಯಾ. ಇದರ ಸೊಬಗು ಮತ್ತು ಬೆಡಗನ್ನು ‘ತಿಳಿಗುಲಾಬಿ ಸೀರೆಯನ್ನು ಧರಿಸಿರುವ ಸುಂದರ ಸ್ತ್ರೀ’ ಎಂದು ಕರೆದಿದ್ದೇನೆ. ಏಪ್ರಿಲ್ ತಿಂಗಳವರೆಗೂ ಇರುವ ಈ ಹೂವಿನ ನಂತರ ಕತ್ತಿಕಾಯಿ ಮರ ಅಂದರೆ ಮೇ ಫ್ಲವರ್ ಹೂ ಬಿಡುತ್ತದೆ. ಹೀಗೇ ಟ್ಯುಲಿಪ್ ಮರ ಅಥವಾ ನೀರುಗಾಯಿ ಮರ ಚಂದದ ಹೂ ಬಿಡುತ್ತದೆ. ಹೀಗೇ ಸಾಗಿ ದಸರಾ ಮರಗಳೆಂದು ಕರೆಯುವ ಕಲ್ವಿಲೇ ರೆಸಿಮೋಸಾ ಕೇಸರಿ ಬಣ್ಣದ ಹೂ ಬಿಡುವವರೆಗೂ ಸಾಗುತ್ತದೆ’ ಎಂದು ಮಾಹಿತಿ ನೀಡುತ್ತಾರೆ.

‘ಈ ದಸರಾ ಮರಗಳನ್ನು ಕ್ರುಂಬಿಗಲ್ ಅವರು ಮೈಸೂರಿನಲ್ಲಿ ನೆಟ್ಟಿದ್ದಾರೆ. ಲಿಲ್ಲಿ ಹೂವರಳಿದಾಗ ಲಂಡನ್ನಿಗೆ ಭೇಟಿ ಕೊಡು; ಟಬೂಬಿಯಾ ಹೂಬಿಟ್ಟಾಗ ಬೆಂಗಳೂರಿಗೆ ಭೇಟಿ ನೀಡು ಎಂಬ ಮಾತು ಚಾಲ್ತಿಯಲ್ಲಿದೆ’ ಎಂಬುದು ಅವರ ವಿವರಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT