ಬಾಗೇಪಲ್ಲಿ: 'ಪಟ್ಟಣದ ಬಹುತೇಕ ಚರಂಡಿಗಳಲ್ಲಿ ಹೂಳು ತುಂಬಿದ್ದು, ಕೊಳಚೆ ನೀರು ನಿಂತು ನಾರುತ್ತಿದೆ, ಚರಂಡಿಗಳ ಸುತ್ತಮುತ್ತಲಿನ ನಿವಾಸಿಗಳು ಅನಾರೋಗ್ಯ ಭೀತಿ ಎದುರಿಸುತ್ತಿದ್ದಾರೆ.
‘ಪಟ್ಟಣದ ಹೃದಯ ಭಾಗದಲ್ಲಿ ರಾಜಕಾಲುವೆ ಹಾದು ಹೋಗಿದೆ. ಈ ಕಾಲುವೆಯೂ ಸೇರಿದಂತೆ ಇತರ ರಸ್ತೆ ಬದಿ ಇರುವ ಚರಂಡಿಗಳು ಹೂಳು, ಕಸಕಡ್ಡಿ ತುಂಬಿವೆ. ಸೊಳ್ಳೆ ಕಾಟ ಹೆಚ್ಚಾಗಿದೆ. ಸ್ವಚ್ಛಗೊಳಿಸಿಲ್ಲ’ ಎಂದು ನಿವಾಸಿ ನಾರಾಯಣಸ್ವಾಮಿ ಸಮಸ್ಯೆ ವಿವರಿಸಿದರು.
ಪಟ್ಟಣದ ಡಾ.ಎಚ್.ಎನ್.ಪಾರ್ಕ್ ಬಳಿ, ಗೂಳೂರು ವೃತ್ತದಿಂದ ಕೊತ್ತಪಲ್ಲಿ, ನೇತಾಜಿ ವೃತ್ತದಿಂದ ಜಿಲಕರಪಲ್ಲಿ, ಕುಂಬಾರಪೇಟೆ, ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್, ರಾಘವೇಂದ್ರ ಚಲನಚಿತ್ರಮಂದಿರದ ಹತ್ತಿರವೂ ಇದೇ ರೀತಿಯ ಸಮಸ್ಯೆ ಕಾಣಬಹುದಾಗಿದೆ.
ರಾಜಕಾಲುವೆಯ ಗೋಳು: ಐದಾರು ವರ್ಷಗಳಿಂದ ಮಂದಗತಿಯಲ್ಲಿ ರಾಜಕಾಲುವೆಯ ದುರಸ್ತಿ ಕಾಮಗಾರಿ ನಡೆಯುತ್ತಿದೆ. ಅನುದಾನದ ಕೊರತೆ ನೆಪವೊಡ್ಡಿ ಕಾಯಕಲ್ಪವೂ ದೊರೆಯದಂತಾಗಿದೆ.
ಶೀಘ್ರ ಕ್ರಮ: 'ಒಂದು ವಾರದೊಳಗೆ ರಾಜಕಾಲುವೆ ದುರಸ್ತಿ ಬಗ್ಗೆ ಅಧಿಕಾರಿಗಳ ಸಭೆ ಕರೆದು ಕ್ರಮ ಕೈಗೊಳ್ಳಲಾಗುವುದು' ಎಂದು ಪುರಸಭೆ ಅಧ್ಯಕ್ಷೆ ಮಮತಾ ನಾಗರಾಜರೆಡ್ಡಿ ತಿಳಿಸಿದರು.