ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬೆಳಗೋಡು ಭಾಗದಲ್ಲಿ ಶನಿವಾರಮತ್ತೊಂದು ಗಂಡಾನೆ ಸೆರೆ ಸಿಕ್ಕಿದೆ.
ಮತ್ತಿಗೂಡು, ದುಬಾರೆ ಶಿಬಿರದ ಆರು ಆನೆಗಳು ಮತ್ತು ಅರಣ್ಯ ಅಧಿಕಾರಿಗಳು, ಸಿಬ್ಬಂದಿ ತಂಡ ಆನೆ ಸೆರೆ ಕಾರ್ಯಾಚರಣೆಯಲ್ಲಿ ತೊಡಗಿದೆ. ಆನೆಯ ಚಲನವಲನಗಳ ಮೇಲೆ ನಿಗಾ ಇಡಲಾಗಿತ್ತು. ತೋಟ ಭಾಗದಲ್ಲಿ ಸಾಗುವಾಗ ಕಾರ್ಯಾಚರಣೆ ನಡೆಸಿ ಹಿಡಿಯಲಾಗಿದೆ.
‘ಆನೆ ಸೆರೆ ಸಿಕ್ಕಿದೆ. ಅದನ್ನು ಮತ್ತಿಗೂಡು ಶಿಬಿರಕ್ಕೆ ಸಾಗಿಸಲು ಚಿಂತನೆ ನಡೆದಿದೆ’ ಎಂದು ಚಿಕ್ಕಮಗಳೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಎಂ.ಸಿ.ಸಿದ್ರಾಮಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.
ಉಪಟಳ ನೀಡುತ್ತಿವೆ ಎಂದು ಸರ್ಕಾರವು ಮೂರು ಆನೆಗಳ ಸೆರೆಗೆ ಆದೇಶ ನೀಡಿದ್ದು, ನ.28ರಿಂದ ಸೆರೆ ಕಾರ್ಯಾಚರಣೆ ಶುರುವಾಗಿದೆ. ಮೊದಲ ದಿನ ಒಂದು ಆನೆ ಸೆರೆ ಸಿಕ್ಕಿತ್ತು. ಅದನ್ನು ಸಕ್ರೆಬೈಲ್ ಶಿಬಿರಕ್ಕೆ ಸಾಗಿಸಲಾಗಿತ್ತು.