ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಯ್ಯನಕೆರೆ: ಅಡ್ಡಾದಿಡ್ಡಿ ಬಗೆದರು!

ಸಣ್ಣ ನೀರಾವರಿ ಇಲಾಖೆ ಅನುಮತಿ ಇಲ್ಲ, ಸರ್ಕಾರಕ್ಕೆ ವರಮಾನವೂ ಇಲ್ಲ
Published 3 ಮೇ 2024, 6:19 IST
Last Updated 3 ಮೇ 2024, 6:19 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಐತಿಹಾಸಿಕ ಅಯ್ಯನಕೆರೆಯಲ್ಲಿ ಹಲವು ವರ್ಷಗಳ ಬಳಿಕ ನೀರು ಖಾಲಿಯಾಗಿದ್ದು, ಕೆರೆಯ ಮಣ್ಣಿಗೆ ಭಾರಿ ಬೇಡಿಕೆ ಬಂದಿದೆ. ಅಡ್ಡಾದಿಡ್ಡಿಯಾಗಿ ಕೆರೆಯ ಮಣ್ಣು ಬಗೆದು ಸಾಗಿಸುವ ಕಾರ್ಯ ನಡೆಯುತ್ತಿದೆ. 

118.45 ಹೆಕ್ಟೇರ್ ವಿಸ್ತೀರ್ಣದ ಕೆರೆಯು ‌420 ಎಂಸಿಎಫ್‌ಟಿ(ಮಿಲಿಯನ್ ಕ್ಯುಬಿಕ್ ಮೀಟರ್) ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. 1,574 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವನ್ನೂ ಹೊಂದಿದೆ. ಅಷ್ಟೂ ಜಮೀನಿಗೆ ಈ ಕೆರೆಯ ನೀರು ಜೀವನಾಡಿ. ಸಖರಾಯಪಟ್ಟಣಕ್ಕೆ ಕುಡಿಯುವ ನೀರನ್ನೂ ಈ ಕೆರೆಯಿಂದ ಪೂರೈಸಲಾಗುತ್ತಿದೆ. 

ಕೆರೆಯ ನೀರು ಈ ಬಾರಿ ಸಂಪೂರ್ಣವಾಗಿ ಖಾಲಿಯಾಗಿದೆ. 20 ವರ್ಷಗಳಿಂದ ನೀರು ಕಡಿಮೆಯಾಗದ ಕಾರಣ ತೂಬಿನಲ್ಲಿ ಬಿದ್ದಿದ್ದ ಕೊಂತ ಮೇಲೆತ್ತಲು ಸಾಧ್ಯವಾಗಿರಲಿಲ್ಲ. ಈ ಬಾರಿ ಹಿಂದೆಂದಿಗಿಂತ ಕಡಿಮೆಯಾಗಿದ್ದರಿಂದ ಉಳಿದ ನೀರನ್ನೂ ಖಾಲಿ ಮಾಡಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ತೂಬು ದುರಸ್ತಿ ಕಾರ್ಯ ಆರಂಭಿಸಿದ್ದಾರೆ.

ಕೆರೆ ನೀರು ಖಾಲಿಯಾಗಿರುವುದು ಮಣ್ಣು ಲೂಟಿಕೋರರಿಗೆ ಲಾಭವಾಗಿದೆ. ಕೆರೆಗೆ ಜೆಸಿಬಿಗಳನ್ನು ಇಳಿಸಿ ಒಡಲು ಬಗೆಯುತ್ತಿವೆ. ಜೆಸಿಬಿ ಮತ್ತು ಟಿಪ್ಪರ್‌ಗಳು ಹಗಲು ರಾತ್ರಿ ಎನ್ನದೆ ಕೆರೆಯಲ್ಲಿ ಸದ್ದು ಮಾಡುತ್ತಿವೆ. ಅಲ್ಲಲ್ಲಿ ಹೊಂಡಗಳನ್ನು ನಿರ್ಮಿಸಲಾಗುತ್ತಿದೆ. ರೈತರ ಜಮೀನಿಗೆ ಮಣ್ಣು ಮಾರಾಟ ಮಾಡಲಾಗುತ್ತಿದೆ.

ಗೋಡು ಮಿಶ್ರಿತ ಕಪ್ಪು ಮಣ್ಣಿರುವ ಜಾಗವನ್ನು ಹುಡುಕಿ ಅಲ್ಲಿ ಹೆಚ್ಚು ಆಳಕ್ಕೆ ಬಗೆಯಲಾಗುತ್ತಿದೆ. ಬೆರೆಡೆ ಹಾಗೇ ಬಿಡಲಾಗಿದೆ. ಮೂರ್ನಾಲ್ಕು ಕಡೆಗಳಲ್ಲಿ ಜೆಸಿಬಿ ಮತ್ತು ಹಿಟಾಚಿ ಇಳಿಸಿ ಕೆರೆ ಬಗೆಯಲಾಗಿದೆ. ಈ ಕೆರೆ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿದ್ದು, ಯಾರ ಅನುಮತಿಯನ್ನೂ ಪಡೆಯದೆ ಮಣ್ಣು ಸಾಗಿಸಲಾಗುತ್ತಿದೆ. ಈ ಕೆರೆಯ ಮಣ್ಣು ಬಗೆಯಲು ಯಾರ ಅನುಮತಿಯನ್ನೂ ಪಡೆದುಕೊಂಡಿಲ್ಲ. ಕೆರೆ ಮಣ್ಣು ತೆಗೆಯುತ್ತಿರುವ ಮಾಹಿತಿಯೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಇಲ್ಲ.

ಕೆರೆಯ ವ್ಯಾಪ್ತಿಯಲ್ಲಿ ಏಳುಕಡೆ ನಡುಗಡ್ಡೆಗಳಿದ್ದು, ಅವುಗಳ ಮರೆಯಲ್ಲಿ ಕೆರೆಯ ಒಡಲು ಬಗೆಯಲಾಗುತ್ತಿದೆ. ಹೆಚ್ಚು ವಿಸ್ತಾರ ಇರುವುದರಿಂದ ಅಧಿಕಾರಿಗಳ ಕಣ್ಣಿಗೂ ಇದು ಬಿದ್ದಿಲ್ಲ. ಆದರೆ, ಕೆರೆಯ ಏರಿಯ ಮೇಲೆ ನಿಂತರೆ ದೂಳೆಬ್ಬಿಸಿಕೊಂಡು ಟ್ರ್ಯಾಕ್ಟರ್‌ಗಳು, ಟಿಪ್ಪರ್‌ಗಳು ಸಾಗುವುದು ಕಾಣಿಸುತ್ತದೆ. ಆದರೂ, ಅಧಿಕಾರಿಗಳು ಗಮನ ಹರಿಸಿಲ್ಲ.

ಸಣ್ಣ ನೀರಾವರಿ ಇಲಾಖೆಯಿಂದ ಅನುಮತಿ ಪಡೆದುಕೊಂಡರೆ ಯಾವ ಭಾಗದಲ್ಲಿ ಎಷ್ಟು ಆಳದ ತನಕ ಮಣ್ಣು ತೆಗೆಯಬೇಕು ಎಂಬುದನ್ನು ನಿಗದಿಪಡಿಸಿಕೊಡಲಾಗುತ್ತದೆ. ಇಲ್ಲಿ ಯಾರ ಅನುಮತಿಯೂ ಇಲ್ಲದಿರುವುದರಿಂದ ಎಲ್ಲೆಂದರಲ್ಲಿ ಎಷ್ಟು ಬೇಕಷ್ಟು ಆಳಕ್ಕೆ ಮಣ್ಣು ತೆಗೆಯಲಾಗುತ್ತಿದೆ. 

ಅಯ್ಯನಕೆರೆಯಿಂದ ಮಣ್ಣು ತೆಗೆದು ಸಾಗಿಸುತ್ತಿದ್ದು ಇಡೀ ಕೆರೆಯಲ್ಲಿ ಧೂಳು ತುಂಬಿಕೊಂಡಿರುವುದು –ಪ್ರಜಾವಾಣಿ ಚಿತ್ರಗಳು/ಎ.ಎನ್.ಮೂರ್ತಿ
ಅಯ್ಯನಕೆರೆಯಿಂದ ಮಣ್ಣು ತೆಗೆದು ಸಾಗಿಸುತ್ತಿದ್ದು ಇಡೀ ಕೆರೆಯಲ್ಲಿ ಧೂಳು ತುಂಬಿಕೊಂಡಿರುವುದು –ಪ್ರಜಾವಾಣಿ ಚಿತ್ರಗಳು/ಎ.ಎನ್.ಮೂರ್ತಿ

ದುಬಾರಿ ದರಕ್ಕೆ ರೈತರಿಗೆ ಮಾರಾಟ

ಅಯ್ಯನಕೆರೆ ಗೋಡು ಮಣ್ಣನ್ನು ದುಬಾರಿ ದರಕ್ಕೆ ರೈತರಿಗೆ ಮಾರಾಟ ಮಾಡಲಾಗುತ್ತಿದೆ. ಒಂದು ಟಿಪ್ಪರ್ ಲೋಡ್ ಮಣ್ಣನ್ನು ಕೆರೆಯ ಸುತ್ತಮುತ್ತಲ ಒಂದೆರಡು ಕಿಲೋ ಮೀಟರ್ ದೂರದ ಜಮೀನಿಗೆ ಸಾಗಿಸಲು ₹2500 ದರ ನಿಗದಿ ಮಾಡಲಾಗಿದೆ. ಐದಾರು ಕಿಲೋ ಮೀಟರ್ ಸಾಗಬೇಕೆಂದರೆ ₹3500 ಅದಕ್ಕಿಂತ ಹೆಚ್ಚು ದೂರವಾದರೆ ಇನ್ನೂ ಹೆಚ್ಚಿನ ದರ ನಿಗದಿ ಮಾಡಿಕೊಂಡಿದ್ದಾರೆ. ಟ್ರ್ಯಾಕ್ಟರ್‌ನಲ್ಲೂ ಮಣ್ಣು ಸಾಗಿಸಲಾಗುತ್ತಿದ್ದು ಕನಿಷ್ಠ ದರ ₹1500 ನಿಗದಿ ಮಾಡಿಕೊಳ್ಳಲಾಗಿದೆ. ‘ಕೆರೆಯಲ್ಲಿ ಹೂಳು ತುಂಬಿಕೊಂಡಿದ್ದರೆ ಸಂಬಂಧಪಟ್ಟ ಇಲಾಖೆ ಹೂಳೆತ್ತುವ ಕಾಮಗಾರಿ ಆರಂಭಿಸುತ್ತದೆ. ಆಗ ಇಂತಿಷ್ಟೇ ಆಳದ ತನಕ ಮಣ್ಣು ತೆಗೆಯಬೇಕು ಎಂದು ನಿಗದಿ ಮಾಡಲಾಗುತ್ತದೆ. ಮಣ್ಣು ಮಾರಾಟ ಮಾಡಿದರೆ ವರಮಾನ ಸರ್ಕಾರಕ್ಕೆ ಬರಲಿದೆ. ಖಾಸಗಿಯವರು ಕೆರೆ ಮಣ್ಣನ್ನು ಮಾರಾಟ ಮಾಡಿಕೊಳ್ಳಲು ಬಿಟ್ಟಿರುವುದು ಸರಿಯಲ್ಲ’ ಎಂದು ಸ್ಥಳೀಯರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT