ಮೂಡಿಗೆರೆ: ಪಟ್ಟಣದ ಕೆ.ಎಂ.ರಸ್ತೆಯಲ್ಲಿರುವ ಹಿರೇದೇವಿರಮ್ಮನ ಬನದ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಎರಡು ದಿನಗಳ ಕಾಲ ನಡೆದ ವಾರ್ಷಿಕ ದೀಪೋತ್ಸವ ಶನಿವಾರ ಸಂಪನ್ನಗೊಂಡಿತು.
ದೀಪೋತ್ಸವದ ಅಂಗವಾಗಿ ಬೆಳಿಗ್ಗೆ ಅಯ್ಯಪ್ಪಸ್ವಾಮಿ, ಗಣಪತಿ, ಸುಬ್ರಹ್ಮಣ್ಯ ಸ್ವಾಮಿ, ಕಾಲಭೈರವೇಶ್ವರ ಹಾಗೂ ಹಿರೇದೇವಿರಮ್ಮನಿಗೆ ಪಂಚಾಮೃತ ಅಭಿಷೇಕ ಮಾಡಲಾಯಿತು ಹಾಗೂ ದೇವಸ್ಥಾನದಲ್ಲಿ ಗಣಪತಿ ಹೋಮ, ಚಂಡಿಕಾ ಹೋಮ ನಡೆದವು. ಮಧ್ಯಾಹ್ನ ಸಾಮೂಹಿಕ ಅನ್ನಸಂತರ್ಪಣೆ ಮಾಡಲಾಯಿತು.
ಸಂಜೆ ಪಾಲಕೊಂಬಿನೊಂದಿಗೆ ನೂರಾರು ಅಯಪ್ಪಸ್ವಾಮಿ ಮಾಲಾಧಾರಿಗಳು ಹಳೇಮೂಡಿಗೆರೆ ಗಣಪತಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಚಂಡೆ ವಾದ್ಯಗಳೊಂದಿಗೆ ದೀಪೋತ್ಸವ ಮೆರವಣಿಗೆ ನಡೆಸಲಾಯಿತು.
ರಾತ್ರಿ ಅಯ್ಯಪ್ಪಸ್ವಾಮಿಗೆ ಶ್ರೀರಂಗಪೂಜೆ ನಡೆಸಿ, ಬಳಿಕ ದೀಪೋತ್ಸವದ ಮಹಾಪೂಜೆ ಆದ ನಂತರ ಅನ್ನಸಂತರ್ಪಣೆ ಮಾಡಲಾಯಿತು. ದೇವಾಲಯ ಸಮಿತಿ ಪದಾಧಿಕಾರಿಗಳು, ಅಯ್ಯಪ್ಪಸ್ವಾಮಿ ಮಾಲಾಧಾರಿಗಳು, ವಿವಿಧೆಡೆಯಿಂದ ಬಂದಿದ್ದ ಭಕ್ತರು ದೀಪೋತ್ಸವದಲ್ಲಿ ಪಾಲ್ಗೊಂಡಿದ್ದರು.