ನರಸಿಂಹರಾಜಪುರ:‘ಬಿಜೆಪಿಯವರು ಹಿಂದುತ್ವ ವಿರೋಧಿಗಳು’

ನರಸಿಂಹರಾಜಪುರ: ಹಿಂದುತ್ವದ ಪ್ರತಿಪಾದಕರಂತೆ ವರ್ತಿಸುವ ಬಿಜೆಪಿಯವರು ಹಿಂದೂ ದೇವರನ್ನು ರಾಜಕೀಯಕ್ಕೆ ಎಳೆದು ತರುವ ಮೂಲಕ ಹಿಂದುತ್ವದ ವಿರೋಧಿಗಳಂತೆ ವರ್ತಿಸುತ್ತಿದ್ದಾರೆ ಎಂದು ಶೃಂಗೇರಿ ಕ್ಷೇತ್ರ ಜೆಡಿಎಸ್ ನಿಯೋಜಿತ ಅಭ್ಯರ್ಥಿ ಸುಧಾಕರ್ ಎಸ್.ಶೆಟ್ಟಿ ಆರೋಪಿಸಿದರು.
ಇಲ್ಲಿನ ವಾಸವಿ ಸಮುದಾಯ ಭವನದಲ್ಲಿ ಶನಿವಾರ ನಡೆದ ಮಹಿಳಾ ಸಮಾವೇಶ ಮತ್ತು ಬಾಗಿನ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬಿಜೆಪಿಯವರು ರಾಮನ ಹೆಸರಿನಲ್ಲಿ ಕೇಂದ್ರದಲ್ಲಿ ಅಧಿಕಾರ ಹಿಡಿದರು. ನಂತರ ಆಂಜನೇಯನನ್ನು ರಾಜಕೀಯ ಎಳೆದು ತಂದರು. ಪ್ರಸ್ತುತ ಸತ್ಯನಾರಾಯಣ ಸ್ವಾಮಿಯನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದು ಹಿಂದೂ ಧರ್ಮಕ್ಕೆ ಮಾಡುವ ಅಪಚಾರವಾಗಿದೆ ಎಂದು ಟೀಕಿಸಿದರು.
ಶೃಂಗೇರಿ ಕ್ಷೇತ್ರ ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ಕಣಿವೆ ವಿನಯ್ ಮಾತನಾಡಿ, ‘ಬಿಜೆಪಿಯವರು ಯುವಕರಿಗೆ ಧರ್ಮದ ಅಮಲನ್ನು ಉಣಿಸುತ್ತಿದ್ದಾರೆ. ಯುವಕರಿಗೆ ಉದ್ಯೋಗ ನೀಡುವ ಬದಲು ಕೋಮುದಳ್ಳುರಿಯ ಅಸ್ತ್ರ ನೀಡುತ್ತಿದ್ದಾರೆ’ ಎಂದರು.
ಶೃಂಗೇರಿ ಕ್ಷೇತ್ರ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಸುಮಾ ಅರುಣ್ ಮಾತನಾಡಿ, ಕ್ಷೇತ್ರದಲ್ಲಿ ಸುಧಾಕರ್ ಶೆಟ್ಟಿಯವರು ಎಲ್ಲ ಮಹಿಳೆಯರಿಗೆ ತವರಿನ ಬಾಗಿನ ಸಮರ್ಪಣೆ ಮಾಡುತ್ತಿದ್ದಾರೆ ಎಂದರು.
ಅಧ್ಯಕ್ಷತೆಯನ್ನು ಜೆಡಿಎಸ್ ಕ್ಷೇತ್ರ ಘಟಕದ ಉಪಾಧ್ಯಕ್ಷ ಸತ್ಯನಾರಾಯಣ ಶ್ರೇಷ್ಠಿ ವಹಿಸಿದ್ದರು. ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ್, ಮುಖಂಡರಾದ ಕೆ.ಎನ್.ಶಿವದಾಸ್, ಉಪೇಂದ್ರಗೌಡ, ಈ.ಸಿ.ಕ್ಸೇವಿಯಾರ್, ಪ್ರಭಾಕರ್, ಅಬ್ದುಲ್ ಸುಬಾನ್, ಮರುಳಪ್ಪ, ಎಂ.ಒ.ಜೋಯಿ, ಕೆ.ಟಿ.ಚಂದ್ರು, ಗಿಣಿಕಲ್ ಭರತ್, ಚಂದ್ರಶೇಖರ್, ಬಿ.ಟಿ.ರವಿ, ಎಂ.ಮಹೇಶ್, ವರ್ಕಾಟೆ ಸುಧಾಕರ್ ಇದ್ದರು. ಮಹಿಳೆಯರಿಗೆ ಬಾಗಿನ ರೂಪದಲ್ಲಿ ಸೀರೆ ನೀಡಲಾಯಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.