ರಾಘವೇಂದ್ರ ಬಡಾವಣೆ: 11ನೇ ವರ್ಷದ ವಾರ್ಷಿಕೋತ್ಸವ

ನರಸಿಂಹರಾಜಪುರ: ಇಲ್ಲಿನ ರಾಘವೇಂದ್ರ ಬಡಾವಣೆಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಪಟ್ಟಣ ಪಂಚಾಯಿತಿಯಿಂದ ನಿವೇಶನ ನೀಡಲಾಗುವುದು ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಜುಬೇದಾ ತಿಳಿಸಿದರು.
ಪಟ್ಟಣದ ಅಗ್ರಹಾರ ಸಮೀಪವಿರುವ ರಾಘವೇಂದ್ರ ಬಡಾವಣೆಯಲ್ಲಿ ಶನಿವಾರ ನಡೆದ ನಿವಾಸಿ ಅಸೋಸಿಯೇಷನ್ನ 11ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಬಡಾವಣೆ ವ್ಯಾಪ್ತಿಯಲ್ಲಿನ ಉದ್ಯಾನ ನಿರ್ಮಾಣ ಹಾಗೂ ನಿವೇಶನ ಸ್ವಚ್ಛತೆ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಪಟ್ಟಣ ಪಂಚಾಯಿತಿ ಸದಸ್ಯ ರೇಖಾ ಮಂಜುನಾಥ್ ಮಾತನಾಡಿ, ರಾಘವೇಂದ್ರ ಬಡಾವಣೆ ನಿವಾಸಿಗಳ ಬೇಡಿಕೆಯನ್ನು ಹಂತಹಂತವಾಗಿ ಈಡೇರಿಸಲಾಗುವುದು ಎಂದರು.
ಸಂಘದ ಗುಣಪಾಲ್ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿ, ರಾಘವೇಂದ್ರ ಬಡಾವಣೆ ವ್ಯಾಪ್ತಿಯಲ್ಲಿ ಸಮುದಾಯಭವನ, ಉದ್ಯಾನ, ಚರಂಡಿಗೆ ಸ್ಲ್ಯಾಬ್, ಕುಡಿಯುವ ನೀರಿಗೆ ಓವರ್ಹೆಡ್ ಟ್ಯಾಂಕ್ ನಿರ್ಮಿಸಿಕೊಡಬೇಕು. ವೀರಮ್ಮಾಜಿ ಕೆರೆಯನ್ನು ಸ್ವಚ್ಛಗೊಳಿಸಬೇಕು ಎಂದರು.
ತಾಲ್ಲೂಕು ಒಕ್ಕಲಿಗರ ಸಂಘದ ಕಾರ್ಯದರ್ಶಿ ಎಸ್.ಎಸ್.ಶಾಂತಕುಮಾರ್ ಮಾತನಾಡಿ, ಮಾನವಿಯತೆ ಇದ್ದವರು ಮಾತ್ರ ಮನುಷ್ಯರಾಗುತ್ತಾರೆ. ಸಂಸ್ಕೃತಿ, ಸಂಸ್ಕಾರ, ಜೀವನದ ಮೌಲ್ಯಗಳಿಲ್ಲದವರು ಮನುಷ್ಯರಾಗಲು ಸಾಧ್ಯವಿಲ್ಲ ಎಂದರು.
ಅಧ್ಯಕ್ಷತೆಯನ್ನು ನಿವಾಸಿ ಅಸೋಸೊಯೇಷನ್ ಅಧ್ಯಕ್ಷೆ ಶೀಲಾ ಸುಂದರೇಶ್ ವಹಿಸಿದ್ದರು.
ನಿವಾಸಿ ಅಸೋಸಿಯೇಷನ್ನ ಗೌರವಾಧ್ಯಕ್ಷ ಜಿ.ಎಚ್. ಸುಂದರೇಶ್, ಅಸೋಸಿಯೇಷನ್ನ ಕಾರ್ಯದರ್ಶಿ ಸವಿತಾ ಕೃಷ್ಣಮೂರ್ತಿ, ವಿಜಯಕುಮಾರ್, ಸ್ವಾತಿ, ವಾಗ್ದೇವಿ ಇದ್ದರು.
ಬಡಾವಣೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ವಾರ್ಷಿಕೋತ್ಸವದ ಅಂಗವಾಗಿ ನಡೆದ ಆಟೋಟ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.