'ಕಾಫಿಗೆ ಬೆಲೆ ಏರಿದ ಖುಷಿಯನ್ನು ಅನುಭವಿಸುವಂತಿಲ್ಲ. ಮಳೆ ಕೊರತೆ ಮತ್ತು ಉಷ್ಣಾಂಶ ಏರಿಕೆಯಿಂದ ಮುಂದಿನ ವರ್ಷದ ಫಸಲಿನ ನಷ್ಟದ ಆತಂಕ ಆರಂಭವಾಗಿದೆ' ಎಂದು ಅಬ್ಬುಗುಡಿಗೆಯೆ ಕಾಫಿ ಬೆಳೆಗಾರ ಸುಧೀರ್ ಹೇಳಿದರು. ಕಾಫಿ ಹೂವು ಅರಳಿರುವ ಕಡೆ, ಅದನ್ನು ಸಂರಕ್ಷಿಸಿಕೊಳ್ಳಲು ಕಾಫಿ ಎಲೆಗಳಿಗೆ ಗೊಬ್ಬರ ಮತ್ತು ಸೂಕ್ಷ್ಮ ಪೋಷಕಾಂಶ ಸಿಂಪಡಿಸುವಂತೆ ಕಾಫಿ ಮಂಡಳಿ ಸಲಹೆ ನೀಡಿದೆ. ಆದರೆ, ಹೆಚ್ಚಿನ ಬೆಳೆಗಾರರು ಈ ಸಲಹೆ ಪಾಲಿಸುತ್ತಿಲ್ಲ.
ತಾಪಮಾನದಲ್ಲಿ ವ್ಯತ್ಯಾಸ
ಉಷ್ಣಾಂಶ ಏರಿಕೆ ರೊಬಸ್ಟ ಕಾಫಿ ಮಿಡಿಗಳಿಗೆ ಹಾನಿ ತರುತ್ತಿದೆ. ಹಗಲು ಮತ್ತು ರಾತ್ರಿ ತಾಪಮಾನದಲ್ಲಿ ತುಂಬಾ ವ್ಯತ್ಯಾಸ ಆಗುವುದು ಕಾಫಿ ಬೆಳೆಗೆ ಒಳ್ಳೆಯದಲ್ಲ ಎಂದು ಅನುಭವಿ ಬೆಳೆಗಾರ ಹೊಸೂರಿನ ವಿಶ್ವನಾಥ ಗೌಡ ಹೇಳಿದರು. ‘ಮಳೆ ಕೊರತೆಯಿಂದಾಗಿ ಈ ಬಾರಿ ಸಣ್ಣ ಹಳ್ಳಗಳೆಲ್ಲ ಬತ್ತಿವೆ. ಇದರಿಂದ ಕಾಫಿ ತೋಟಕ್ಕೆ ನೀರು ಉಣಿಸುವುದು ಸವಾಲಾಗಿದೆ. ಉತ್ತಮ ಧಾರಣೆ ಇದ್ದರೂ, ಬೆಳೆ ಉಳಿಸಿಕೊಳ್ಳಲು ಪರದಾಡುವಂತಾಗಿದೆ’ ಎನ್ನುತ್ತಾರೆ ರೈತರು.