ಚಿಕ್ಕಮಗಳೂರು: ಹೆಡ್ ಕಾನ್ಸ್ಟೆಬಲ್ ಮೇಲೆ ಹಲ್ಲೆ ಎಸಗಿ,ಕರ್ತವ್ಯಕ್ಕೆ ಅಡ್ಡಿಪಡಿ ಸಿದಪ್ರಕರಣದಲ್ಲಿ ಮುತ್ತಿನಕೊಪ್ಪದ ಎಂ.ಎನ್.ಸುಮಂತ್, ಚಬ್ಬೆನಾಡಿನ ಸಂತೋಷ್, ಶಾಂತಿ ಕಾಲೊನಿಯ ಪ್ರಮೋದ್ಗೆ ತಲಾ ₹ 10 ಸಾವಿರ ದಂಡವನ್ನು ಎನ್.ಆರ್.ಪುರದ ಜೆಎಂಎಫ್ಸಿ ಕೋರ್ಟ್ ವಿಧಿಸಿದೆ.
ನ್ಯಾಯಾಧೀಶ ಬಿ. ಪ್ರಿಯಾಂಕಾ ಅವರು ಈ ಆದೇಶ ನೀಡಿದ್ದಾರೆ. ದಂಡ ಪಾವತಿಸಲು ತಪ್ಪಿದಲ್ಲಿ ಎರಡೂವರೆ ತಿಂಗಳು ಜೈಲು ಅನುಭವಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಏನಿದು ಪ್ರಕರಣ: 2017 ಜುಲೈ 1ರಂದು ಮುತ್ತಿನಕೊಪ್ಪದ ಕೀರ್ತಿ ಬಾರ್ ಮತ್ತು ರೆಸ್ಟೊರೆಂಟ್ನ ಮುಂಭಾಗದ ರಸ್ತೆಯ ಪಕ್ಕದಲ್ಲಿ ಸುಮಂತ್, ಸಂತೋಷ್, ಪ್ರಮೋದ್ ಬೈಕ್ನ ಬ್ಯಾಗ್ನಲ್ಲಿ ಮದ್ಯ ಬಾಟಲಿ ಇಟ್ಟುಕೊಂಡು ಮಾರಾಟದಲ್ಲಿ ತೊಡಗಿದ್ದರು. ಅದನ್ನು ಪ್ರಶ್ನಿಸಿದ ಹೆಡ್ ಕಾನ್ಸ್ಟೆಬಲ್ ಈಶ್ವರಪ್ಪ ಅವರ ಮೇಲೆ ಮೂವರೂ ಹಲ್ಲೆ ನಡೆಸಿ ಗಾಯಗೊಳಿಸಿದ್ದರು.
ಎನ್.ಆರ್.ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಕೋರ್ಟ್ಗೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಸಹಾಯಕ ಪಬ್ಲಿಕ್ ಪ್ರಾಸಿಕ್ಯುಟರ್ ಶಾಂಭವಿ ವಾದ ಮಂಡಿಸಿದ್ದರು.