ಚಿಕ್ಕಮಗಳೂರು: ನಗರದಲ್ಲಿ ಶುಕ್ರವಾರ ಜರುಗಿದ ಕರುಮಾರಿಯಮ್ಮ ದೇವಿ ಕರಗ ಮಹೋತ್ಸವ, ಸಿಡಿ ಉತ್ಸವದಲ್ಲಿ ಕೆಲ ಭಕ್ತರು ಬೆನ್ನಿಗೆ ಕಬ್ಬಿಣದ ಬಳೆ ಸಿಕ್ಕಿಸಿ, ಹಗ್ಗ ಕಟ್ಟಿಕೊಂಡು ದೇವಿ ಪ್ರತಿಷ್ಠಾಪಿಸಿದ್ದ ವಾಹನವನ್ನು ಎಳೆದೊಯ್ದರು.
ಮಹೋತ್ಸವದ ಅಂಗವಾಗಿ ದೇವಿ ಮೆರವಣಿಗೆ ಜರುಗಿತು. ಐವರು ಭಕ್ತರು ಬೆನ್ನಿಗೆ ಸಿಕ್ಕಿಸಿಕೊಂಡಿದ್ದ ಕಬ್ಬಿಣದ ಬಳೆಗಳಿಗೆ ಹಗ್ಗಗಳನ್ನು ಕಟ್ಟಿಕೊಂಡು ಟ್ರ್ಯಾಕ್ಟರ್ ಎಳೆದು ಸಾಗಿದರು.
ಲಾರಿಯೊಂದರ ಮುಂಭಾಗಕ್ಕೆ ಸಿಕ್ಕಿಸಿದ್ದ ಕಟ್ಟಿಗೆಗೆ ಹಗ್ಗ ಕಟ್ಟಿಕೊಂಡು ಭಕ್ತರೊಬ್ಬರು ಅಡ್ಡಡ್ಡ ನೇತಾಡಿಕೊಂಡು ಸಾಗಿದರು. ನೂರಾರು ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
‘ವಾಹನ ಎಳೆದು, ದೇವಿಗೆ ಪೂಜೆ ಸಲ್ಲಿಸಿ ಹರಕೆ ತೀರಿಸುತ್ತಾರೆ. ಬೇಡ ಎಂದು ಹೇಳಿದರೆ ಕೇಳಲ್ಲ’ ಎಂದು ದೇಗುಲ ಸಮಿತಿ ಅಧ್ಯಕ್ಷ ರಘು ತಿಳಿಸಿದರು.
‘ಬೆನ್ನಿಗೆ ಕಬ್ಬಿಣದ ಬಳೆ ಸಿಕ್ಕಿಸಿಕೊಂಡು ಹಗ್ಗ ಕಟ್ಟಿಕೊಂಡು ವಾಹನ ಎಳೆದಿರುವುದು ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲನೆ ಮಾಡಲಾಗುವುದು’ ಎಂದು ತಹಶೀಲ್ದಾರ್ ವಿನಾಯಕ ಸಾಗರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಚಿಕ್ಕಮಗಳೂರಿನಲ್ಲಿ ಶುಕ್ರವಾರ ಕರುಮಾರಿಯಮ್ಮ ದೇವಿ ಉತ್ಸವದಲ್ಲಿ ಭಕ್ತರೊಬ್ಬರು ಲಾರಿಯ ಮುಂಭಾಗದ ಕಟ್ಟಿಗೆಗೆ ಹಗ್ಗ ಕಟ್ಟಿಕೊಂಡು ಅಡ್ಡಡ ಜೋತಾಡಿದರು.