ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೆ ಓಡಿಸಲು ಸಿಬ್ಬಂದಿ ಹರಸಾಹಸ: ರೈತರಲ್ಲಿ ಆತಂಕ

ಯರೇಹಳ್ಳಿ ಬಳಿ ಬೀಡುಬಿಟ್ಟಿರುವ 3 ಆನೆಗಳು-– ರೈತರಲ್ಲಿ ಆತಂಕ
Last Updated 14 ಜನವರಿ 2022, 16:37 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ನಗರದ ಹೊರವಲ ಯದ ನಲ್ಲೂರು, ಯರೇಹಳ್ಳಿ ಭಾಗದಲ್ಲಿ ಮೂರು ಆನೆಗಳು ಬೀಡುಬಿಟ್ಟಿದ್ದು, ಸುತ್ತಮುತ್ತಲಿನ ಜನರಲ್ಲಿ ಆತಂಕ ಮೂಡಿಸಿದೆ. ನಲ್ಲೂರು, ಯರೇಹಳ್ಳಿ ಪ್ರದೇಶದ ಗದ್ದೆ ಭಾಗದಲ್ಲಿ ಆನೆಗಳು ಇವೆ. ಕಬ್ಬು, ಭತ್ತದ ಗದ್ದೆಗಳಲ್ಲಿ ಓಡಾಡಿವೆ. ಗದ್ದೆಗಳಲ್ಲಿ ಹೆಜ್ಜೆ ಗುರುತುಗಳು ಇವೆ. ಕಬ್ಬು, ಭತ್ತ ಹಾಳಾಗಿದೆ.

ಆನೆಗಳನ್ನು ನೋಡಿದ ಸ್ಥಳೀಯರು ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಸಿಬ್ಬಂದಿ ಮಧ್ಯಾಹ್ನದಿಂದ ಆನೆಗಳನ್ನು ಕಾಡಿಗೆ ಓಡಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಆನೆಗಳನ್ನು ಓಡಿಸುವ ‍ತರಬೇತಿ ಪಡೆದಿರುವ ಮೂಡಿಗೆರೆಯ ತಂಡವನ್ನು ಕರೆಸಲಾಗಿದೆ. ಸಂಜೆಯೂ ಕಾರ್ಯಾಚರಣೆ ಮುಂದುವರಿದಿತ್ತು. ಪಟಾಕಿ ಸಿಡಿಸಿ ಆನೆಗಳನ್ನು ಓಡಿಸುವ ಪ್ರಯತ್ನ ನಡೆದಿದೆ.

‘ಆನೆಗಳು ಕೆ.ಆರ್‌.ಪೇಟೆ, ಕೂದುವಳ್ಳಿ ಕಡೆಯಿಂದ ಬಂದಿವೆ. ಆಹಾರ ಹುಡುಕಿಕೊಂಡು ಬಂದಿರಬಹುದು. ಇಲಾಖೆಯವರು ಡ್ರೋನ್‌ ಮೂಲಕ ಕಾರ್ಯಾಚರಣೆ ಮಾಡಿದಾಗ ಮೂರು ಆನೆಗಳಿವೆ ಎಂದು ಗೊತ್ತಾಗಿದೆ. ಜನವಸತಿ ಪ್ರದೇಶದತ್ತ ಆನೆಗಳು ಬರದಂತೆ ಅರಣ್ಯ ಸಿಬ್ಬಂದಿ ಎಚ್ಚರ ವಹಿಸಿದ್ದಾರೆ’ ಎಂದು ಗೌರವ ವನ್ಯಜೀವಿ ಪರಿಪಾಲಕ ಜಿ.ವೀರೇಶ್‌ ತಿಳಿಸಿದರು.

ಸುಮಾರು 40ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಆನೆಗಳ ಓಡಾಟದ ಜಾಡು ಹಿಡಿದು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸಂಜೆ, ಕತ್ತಲಿನಲ್ಲಿ ಕಾರ್ಯಾಚರಣೆ ಕಷ್ಟವಾಗಿದೆ. ಆನೆಗಳು ನಗರದ ಹೊರವಲಯದಲ್ಲಿ ಬೀಡುಬಿಟ್ಟಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಉಂಡೇದಾಸರಹಳ್ಳಿ ಸುತ್ತಮುತ್ತಲಿನ ಪ್ರದೇಶದಲ್ಲಿ ಜನರು ಭಯಗೊಂಡಿದ್ದಾರೆ.

‘ಆರು ತಿಂಗಳ ಹಿಂದೆಯೂ ಆನೆಯೊಂದು ಈ ಭಾಗಕ್ಕೆ ನುಗ್ಗಿತ್ತು. ಕಬ್ಬು, ಬಾಳೆ ತೋಟಕ್ಕೆ ಅವಾಂತರ ಮಾಡಿತ್ತು. ನಗರದೊಳಗೆ ಹಾದುಹೋಗಿತ್ತು. ಈ ಭಾಗದ ಗದ್ದೆಯ ಬದಿಯ ಹಾದಿಗಳಲ್ಲಿ ಓಡಾಡಲು ಭಯವಾಗುತ್ತೆ’ ಎಂದು ಉಂಡೇದಾಸರಹಳ್ಳಿ ನಿವಾಸಿ ಪ್ರದೀಪ್‌ ಅಳಲು ತೋಡಿಕೊಂಡರು.

ಸಹಾಯಕ ಅರಣ್ಯಸಂರಕ್ಷ ಣಾಧಿಕಾರಿ ಮುದ್ದಣ್ಣ, ವಲಯ ಅರಣ್ಯಾಧಿಕಾರಿ ಸ್ವಾತಿ, ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT