ಕೊಟ್ಟಿಗೆಹಾರ: ನಾಲ್ಕು ದಿನಗಳಿಂದ ಬಣಕಲ್, ಕೊಟ್ಟಿಗೆಹಾರ, ಬಾಳೂರು, ಚಾರ್ಮಾಡಿ ಘಾಟ್ ಸುತ್ತಮುತ್ತ ಬಾರಿ ಮಳೆಯಾಗುತ್ತಿದ್ದು, ಬುಧವಾರದಿಂದ ಶುಕ್ರವಾರ ದವರೆಗೆ 39.58ಸೆ.ಮೀ ಮಳೆಯಾಗಿದೆ.
ಬಾಳೂರು, ಬಣಕಲ್ ಭಾಗದಲ್ಲಿ ಹಲವು ಕಡೆಗಳಲ್ಲಿ ವಿದ್ಯುತ್ ಕಂಬಗಳು ಬಿದ್ದಿದ್ದು, ವಿದ್ಯುತ್ ಮಾರ್ಗದ ಸಮಸ್ಯೆಯು ತಲೆದೋರಿದೆ.
ಬಣಕಲ್ನ ಹರ್ಷವರ್ಧನ್ ಮನೆ ಹತ್ತಿರ ವಿದ್ಯುತ್ ಕಂಬ ಮುರಿದಿದೆ. ದೇವನಗೂಲ್, ಜಾರ್ಗಲ್ ಮತ್ತಿತರ ಕಡೆಗಳಲ್ಲಿ ವಿದ್ಯುತ್ ಕಂಬ ಮುರಿದಿವೆ. ಹಲವು ಕಡೆ ವಿದ್ಯುತ್ ಮಾರ್ಗದಲ್ಲಿ ಲೈನ್ ಸಮಸ್ಯೆ ಉಂಟಾಗಿದೆ. ನಾಲ್ಕು ದಿನಗಳಿಂದ ವಿದ್ಯುತ್ ಕೈ ಕೊಟ್ಟಿದ್ದು, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪಾಡು ಹೇಳ ತೀರದಾಗಿದೆ.
ತ್ರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಕ್ಕಿ ಗ್ರಾಮದ ಸುಬ್ಬಯ್ಯ ಅವರ ಮನೆ ಕುಸಿದಿದೆ. ಅತಿಯಾದ ಮಳೆಯಿಂದ ಹೇಮಾವತಿ ನದಿ ತುಂಬಿ ಹರಿಯುತ್ತಿದೆ.ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಿದೆ. ಶುಕ್ರವಾರವೂ ಧಾರಾಕಾರ ಮಳೆ ಮುಂದುವರಿದಿದ್ದು ಹೆಚ್ಚಿನ ಹಾನಿಯಾಗುವ ಸಂಭವ ಎದುರಾಗಿದೆ.
ಎಸ್ಸೆಸ್ಸೆಲ್ಸಿ ಮಕ್ಕಳು ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ವಿದ್ಯುತ್ ಸಮಸ್ಯೆ ಒಂದೆಡೆಯಾದರೆ, ನೆಟ್ವರ್ಕ್ ಸಮಸ್ಯೆ ಮತ್ತೊಂದೆಡೆ ಕಾಡುತ್ತಿದೆ. ಹೀಗಾಗಿ, ಕಲಿಕೆಗೆ ತೊಂದರೆಯಾಗುತ್ತಿದೆ. ಈ ಸಮಸ್ಯೆಯನ್ನು ಬಗೆಹರಿಸುವಂತೆ ಪೋಷಕರಾದ ಕೊಟ್ಟಿಗೆಹಾರ ಶಂಕರ್ ಆಚಾರ್ಯ ಒತ್ತಾಯಿಸಿದ್ದಾರೆ.