ಕಡೂರು: ಜಾತ್ಯತೀತ ಮನೋಭಾವ ದಲ್ಲಿ ಸದೃಢ ಭಾರತ ನಿರ್ಮಾಣದತ್ತ ಯುವಜನತೆ ಮುಂದಾಗಬೇಕಿದೆ ಎಂದು ಶಾಸಕ ಬೆಳ್ಳಿ ಪ್ರಕಾಶ್ ಹೇಳಿದರು.
ಸೋಮವಾರ ತಾಲ್ಲೂಕಿನ ಚಿನಕರಿಹಳ್ಳಿ ಗ್ರಾಮದಲ್ಲಿ ನಮೂನೆ 57ರ ಅಡಿಯಲ್ಲಿ ರೈತರಿಗೆ ಸಾಗುವಳಿ ಚೀಟಿ ವಿತರಿಸಿ ಅವರು ಮಾತನಾಡಿದರು.
ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವಾಗ ಜಾತಿ–ಧರ್ಮ ಗಣನೆಗೆ ಬರುವುದಿಲ್ಲ. ಅರ್ಹ ಫಲಾನುಭವಿಗಳಿಗೆ ಮಾತ್ರ ಸರ್ಕಾರದ ಸವಲತ್ತು ದೊರೆಯಬೇಕು. ಗ್ರಾಮೀಣ ಯುವಕರು ಸಮಾನತೆಯ ಮನೋಭಾವ ಬೆಳೆಸಿಕೊಂಡು ದೇಶದ ಒಳಿತಿನ ಬಗ್ಗೆ ಚಿಂತನೆ ನಡೆಸಬೇಕಾದ ಅಗತ್ಯ ಈಗ ಹಿಂದೆಂದಿಗಿಂತಲೂ ಹೆಚ್ಚಾಗಿದೆ ಎಂದರು.
ಚಿನಕರಿಹಳ್ಳಿಯಲ್ಲಿ ಒಟ್ಟು 46 ಜನ ಸಾಗುವಳಿ ಚೀಟಿಗೆ ಅರ್ಜಿ ಸಲ್ಲಿಸಿದ್ದು, ಸಾಂಕೇತಿಕವಾಗಿ 4 ಜನರಿಗೆ ಸಾಗುವಳಿ ಚೀಟಿ ನೀಡಲಾಗಿದೆ. ಉಳಿದ 17 ಜನರಿಗೆ 20 ದಿನಗಳಲ್ಲಿ ಹಕ್ಕುಪತ್ರ ನೀಡಲಾಗುವುದು. ಬಾಕಿ 25 ಪ್ರಕರಣಗಳಲ್ಲಿ ಕಾನೂನು ತೊಡಕಿದ್ದು ಈ ಬಗ್ಗೆ ಪರಿಶೀಲಿಸಲಾಗುವುದು. ಗ್ರಾಮದಲ್ಲಿ 3 ಎಕರೆ ಜಾಗವನ್ನು ಸ್ಮಶಾನಕ್ಕೆ ಮೀಸಲಿಡಲಾಗಿದೆ ಎಂದು ತಿಳಿಸಿದರು.
ಗಡಿ ಗ್ರಾಮಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅರಿವಿದೆ. ಈ ಗ್ರಾಮ ದೊಳಗಿನ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಮುಖ್ಮಯಂತ್ರಿಯ ವಿಶೇಷ ಅನುದಾ ನದಲ್ಲಿ ₹ 10 ಲಕ್ಷ ನೀಡಲಾಗಿದೆ. ಗ್ರಾಮದ ಬೊಮ್ಮಲಿಂಗೇಶ್ವರ ಸ್ವಾಮಿ ಸಮುದಾಯ ಭವನದ ಶೌಚಾಲಯ ನಿರ್ಮಾಣಕ್ಕೆ ₹ 1 ಲಕ್ಷ ಒದಗಿಸ ಲಾಗುವುದು ಎಂದು ಹೇಳಿದರು.
ಬೆಲಗೂರನ್ನು ಸಂಪರ್ಕಿ ಸುವ ರಸ್ತೆಯಲ್ಲಿ ಸೇತುವೆಯೊಂದು ಮಳೆಯಿಂ ದಾಗಿ ಹಾನಿಗೊಳಗಾಗಿರುವು ದನ್ನು ಪರಿಶೀಲಿಸಿದ ಶಾಸಕರು, ಕೂಡಲೇ ಸೇತುವೆ ದುರಸ್ತಿಗೊಳಿಸಲು ಕ್ರಮಕೈಗೊ ಳ್ಳುವಂತೆ ಲೋಕೋಪಯೋಗಿ ಎಂಜಿನಿಯರ್ ಅವರಿಗೆ ಸೂಚಿಸಿದರು.
ಸಾಗುವಳಿ ಚೀಟಿ ಪಡೆಯಲು ರೈತರು ಎದುರಿಸುತ್ತಿರುವ ಕಾನೂನು ತೊಡಕುಗಳನ್ನು ಮೂರು ದಿನಗಳ ಕಾಲ ಗ್ರಾಮದಲ್ಲಿದ್ದು, ಬಗೆಹರಿಸುವಂತೆ ಕಂದಾಯ ನಿರೀಕ್ಷಕ ಕೆ.ರಮೇಶ್ ಅವರಿಗೆ ಸೂಚಿಸಿದರು.
ತಹಶೀಲ್ದಾರ್ ಜೆ.ಉಮೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಆರ್.ನಂಜುಂಡಪ್ಪ, ಬಿಜೆಪಿ ತಾಲ್ಲೂಕು ಮಂಡಲ ಅಧ್ಯಕ್ಷ ಬಿ.ಪಿ.ದೇವಾನಂದ್, ಯಗಟಿ ಶಕ್ತಿಕೇಂದ್ರದ ಅಧ್ಯಕ್ಷ ಚಿನ್ನು ದೇವರಾಜ್, ಕಂದಾಯ ನಿರೀಕ್ಷಕ ಕೆ.ರಮೇಶ್, ಗ್ರಾಮಲೆಕ್ಕಿಗ ಅಂಬರೀಶ್ ರಾಥೋಡ್ ಇದ್ದರು.