ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವವೈವಿಧ್ಯ ಸಮಿತಿ ಬಲಪಡಿಸಲು ಆದ್ಯತೆ

ಸುವರ್ಣವನಕ್ಕೆ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಭೇಟಿ
Last Updated 20 ಜೂನ್ 2021, 1:19 IST
ಅಕ್ಷರ ಗಾತ್ರ

ನರಸಿಂಹರಾಜಪುರ: ‘ರಾಜ್ಯದಲ್ಲಿ ನಗರ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜೀವವೈವಿಧ್ಯ ಸಮಿತಿ ರಚಿಸಿ, ಜೀವವೈವಿಧ್ಯ ದಾಖಲಾತಿಯನ್ನು ಮಾಡಿ ಪೂರ್ಣಗೊಳಿಸಲಾಗಿದೆ. ಪ್ರಸ್ತುತ ತಾಲ್ಲೂಕಿನ ವ್ಯಾಪ್ತಿಯ ಜೀವವೈವಿಧ್ಯ ಸಮಿತಿಗಳನ್ನು ಬಲಪಡಿಸುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲಾಗಿದೆ’ ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ತಿಳಿಸಿದರು.

ತಾಲ್ಲೂಕಿನ ಸೌತಿಕೆರೆ ಗ್ರಾಮದ ಸುವರ್ಣವನಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲನೆ ಮಾಡಿದ ನಂತರ ಸುದ್ದಿಗಾರ ರೊಂದಿಗೆ ಅವರು ಮಾತನಾಡಿದರು.

‘ಜೀವವೈವಿಧ್ಯ ವ್ಯಾಪ್ತಿಯನಲ್ಲಿ ನದಿ, ಗುಡ್ಡ, ಬೆಟ್ಟ, ಕೆರೆಗಳು, ನದಿ ಮೂಲಗಳು ಬರುತ್ತವೆ. ಜೀವವೈವಿಧ್ಯ ಕಾಯ್ದೆಯ ಅನ್ವಯ ಇವುಗಳನ್ನು ಸಂರಕ್ಷಿಸಬೇಕಾಗಿದೆ. ನರಸಿಂಹ ರಾಜಪುರ ಭಾಗದಲ್ಲಿ ಉತ್ತಮವಾದ ಅರಣ್ಯ, ಭದ್ರಾ ಹಿನ್ನಿರುವ ಪ್ರದೇಶವಿದೆ. ಅರಣ್ಯವನ್ನು ಸಾಂಪ್ರದಾಯಿಕವಾಗಿ ರೈತರು ಸಂರಕ್ಷಿಸಿಕೊಂಡು ಬಂದಿದ್ದರು. ಕಳೆದ 28 ವರ್ಷಗಳಲ್ಲಿ ಅರಣ್ಯ ಒತ್ತುವರಿ ಮಾಡುವ ಪ್ರವೃತ್ತಿ ಹೆಚ್ಚಾಗಿ ಅರಣ್ಯಕ್ಕೆ ಬಹಳಷ್ಟು ಆತಂಕ ಬಂದಿದೆ. ವಿಶೇಷವಾಗಿ ನದಿಮೂಲಗಳು, ಕೆರೆಗಳು ಮತ್ತು ನದಿಕಣಿವೆಗಳಿಗೆ ಧಕ್ಕೆ ಬಂದಿದೆ’ ಎಂದು ಅಭಿಪ್ರಾಯಪಟ್ಟರು.

‘ಪಶ್ಚಿಮಘಟ್ಟದ ಹಸಿರು ಅರಣ್ಯ ಗಳನ್ನು ರಕ್ಷಣೆ ಮಾಡಲು ಏನೆಲ್ಲಾ ಸಾಧ್ಯತೆಗಳು ಇದೆ. ಸರ್ಕಾರದ ಇಲಾಖೆ ಗಳು ಹಾಗೂ ಜನರ ಸಹಭಾಗಿತ್ವ ತೆಗೆದುಕೊಂಡು ನೈಸರ್ಗಿಕ ಸಂಪತ್ತು ಸಂರಕ್ಷಿಸಲು ಕಾರ್ಯಕ್ರಮ ರೂಪಿ ಸಬೇಕಾಗಿದೆ. ಈಗಾಗಲೇ ಹಲವು ಕಾರ್ಯ ಕ್ರಮಗಳಿದ್ದು, ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ರೂಪಿಸಬೇಕಾ ಗಿದೆ. ಇದಕ್ಕೆ ಜೀವವೈವಿಧ್ಯ ಕಾಯ್ದೆ ತುಂಬಾ ಬಲವನ್ನು ಕೊಟ್ಟಿದೆ. ನೈಸರ್ಗಿಕ ಸಂಪತ್ತು ರಕ್ಷಿಸಲು ಸಿಕ್ಕಿರುವ ಪ್ರಮುಖ ಅಸ್ತ್ರ ಗ್ರಾಮ ಪಂಚಾಯಿತಿ ಮಟ್ಟದಲ್ಲಿರುವ ಜೀವ ವೈವಿಧ್ಯ ಸಮಿತಿಯನ್ನು ಚಾಲನೆಗೊಳಿಸುವ ನಿಟ್ಟಿನಲ್ಲಿ ಸಭೆಗಳನ್ನು ಆಯೋಜಿಸಲಾಗುತ್ತಿದೆ’ ಎಂದರು.

‘ಪರಿಸರ ಕಾರ್ಯಪಡೆಯಿಂದ 35 ವರ್ಷಗಳಲ್ಲಿ ಚಿಕ್ಕಮಗಳೂರು, ಶಿವಮೊಗ್ಗ, ಬಾಳೆಹೊನ್ನೂರು, ಕಳಸ, ಕೊಪ್ಪ ಭಾಗಗಳಲ್ಲಿ ಹಲವಾರು ಅರಣ್ಯದ ಮತ್ತು ನದಿಕಣಿವೆಗಳ ಸಂರಕ್ಷಣೆಗಳ ವಿಚಾರದಲ್ಲಿ ಅಭಿಯಾನ ನಡೆಸಲಾಗಿತ್ತು. ಕಾರ್ಯಪಡೆಯ 2008–2013ರವೆಗೆ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದಾಗ ಚಿಕ್ಕಮಗಳೂರು ಜಿಲ್ಲೆಯ ಹಲವು ಪ್ರದೇಶಗಳಲ್ಲಿ ದೇವರ ಕಾಡು ಸಂರಕ್ಷಣಾ ಯೋಜನೆ ಜಾರಿಗೊಳಿಸಲಾಗಿತ್ತು. ನೈಸರ್ಗಿಕ ಔಷಧಿ ಸಸ್ಯಗಳನ್ನು ಸಂರಕ್ಷಿತ ಪ್ರದೇಶ ಎಂದು ಘೋಷಿಸಲಾಗಿತ್ತು’ ಎಂದರು.

‘ಯಾವುದೇ ಪ್ರದೇಶದಲ್ಲಿ ಪ್ರವಾಸ ಮಾಡುವ ಸಂದರ್ಭಗಳಲ್ಲಿ ಆ ಭಾಗಗಲ್ಲಿನ ಅರಣ್ಯ ಸಮಸ್ಯೆಗಳು, ದೊಡ್ಡ ಪ್ರಮಾಣದಲ್ಲಿ ಅರಣ್ಯ ಒತ್ತುವರಿ, ಕೆರೆಗಳ ಒತ್ತುವರಿ ಸಮಸ್ಯೆಯ ಬಗ್ಗೆ ಮಾಹಿತಿ ನೀಡಿ ಇವುಗಳನ್ನು ಉಳಿಸುವ ರಚನಾತ್ಮಕ ಕೆಲಸಗಳಲ್ಲಿ ಪತ್ರಕರ್ತರು ತೊಡಗಿಕೊಳ್ಳಬೇಕು’ ಎಂದು ಅನಂತ ಹೆಗಡೆ ಅಶೀಸರ ತಿಳಿಸಿದರು.

ಎಸಿಎಫ್ ಕೆ.ವಿ. ಮಂಜುನಾಥ್, ಇಒ ಎಸ್.ನಯನ, ವಲಯ ಅರಣ್ಯಾಧಿಕಾರಿಗಳಾದ ರಂಗನಾಥ್, ಸಂತೋಷ್ ಸಾಗರ್, ಸಮಿತಿಯ ಗಜೇಂದ್ರ ಗೇರುಸುಕೂಡಿಗೆ, ಗೌಸ್ ಮೋಯಿದ್ದಿನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT