ಕಳಸ: ಹೊರನಾಡು- ಬಲಿಗೆ ರಸ್ತೆ ಕಾಮಗಾರಿಗೆ ಕೆಲ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಈ ರಸ್ತೆಯನ್ನು ಬಳಸುವ ಅನೇಕ ಗ್ರಾಮಸ್ಥರು ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕಾರ ಮಾಡುವುದಾಗಿ ತಿಳಿಸಿದ್ದಾರೆ.
‘ಹೊರನಾಡು- ಬಲಿಗೆ ರಸ್ತೆ ಕಾಮಗಾರಿಗೆ ₹ 7 ಕೋಟಿ ಮಂಜೂರಾಗಿದ್ದು, ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಆದರೆ, ಹೊರನಾಡಿನಿಂದ ಆರಂಭಿಸಿ ಮೊದಲ 1 ಕಿ.ಮೀ. ಕಾಮಗಾರಿ ನಡೆಸಲು ಕೆಲ ಸ್ಥಳೀಯರು ಸಹಕಾರ ನೀಡುತ್ತಿಲ್ಲ. ಇದರಿಂದ ನಮಗೆ ಅತ್ಯಗತ್ಯವಾದ ರಸ್ತೆ ಬಳಕೆಗೆ ಸಿಗುತ್ತಿಲ್ಲ’ ಎಂದು ಗ್ರಾಮಸ್ಥರು ಗುರುವಾರ ಸಂಜೆ ಬಲಿಗೆ ಕಡಿವೆಯಲ್ಲಿ ನಡೆದ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಕಪ್ಪಿನಕುಂಬ್ರಿ, ಮೇಲುಮಂಚಿಗೆ, ದಂಟಗ, ತುರ, ಬಳಿಗೋಳು, ಹೊನ್ನೆ ಕಾಡು, ಕೆಸುವಿನ ಕೊಂಡ, ಅಕ್ಕಸಾಲು ಮಕ್ಕಿ, ಹುಲಿಬಿಳಲು, ಚಿಕ್ಕನಕುಡಿಗೆ, ಬಲಿಗೆ ಗ್ರಾಮಸ್ಥರು ಚುನಾವಣಾ ಬಹಿಷ್ಕಾರ ಮಾಡುವ ಬಗ್ಗೆ ಸ್ಪಷ್ಟ ತೀರ್ಮಾನ ತೆಗೆದುಕೊಂಡರು.