ಕಳಸ: ಇಲ್ಲಿಗೆ ಸಮೀಪದ ಮರಸಣಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರದೇಶವನ್ನು ಬಣಕಲ್ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಹೊರತುಪಡಿಸಿ ಕಳಸ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಸೇರಿಸಬೇಕು ಎಂಬ ಬಲವಾದ ಆಗ್ರಹ ಕೇಳಿಬಂದಿದೆ.
‘8-10 ಕಿ.ಮೀ ದೂರದ ಕಳಸ ಜಿಲ್ಲಾ ಪಂಚಾಯಿತಿ ಕ್ಷೇತ್ರ ಬಿಟ್ಟು 40 ಕಿ.ಮೀ ದೂರದ ಬಣಕಲ್ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಮಸರಣಿಗೆಯನ್ನು ಸೇರಿಸಿರುವುದರಿಂದ ಅಭಿವೃದ್ಧಿಗೆ ತೊಡಕಾಗಿದೆ. ಈ ಅವೈಜ್ಞಾನಿಕ ಕ್ರಮದಿಂದ ನಮಗೆ ಜನಪ್ರತಿನಿಧಿ ಗಳು ಕೈಗೆ ಸಿಗದಂತಾಗಿದ್ದಾರೆ’ ಎಂದು ಸ್ಥಳೀಯರು ಗಮನ ಸೆಳೆದಿದ್ದಾರೆ.
ಮರಸಣಿಗೆ ತಾಲ್ಲೂಕು ಪಂಚಾಯಿತಿ ಕ್ಷೇತ್ರ ಕೂಡ ದೂರದ ಬಾಳೂರು, ಸುಂಕಸಾಲೆ, ಜಾವಳಿ ಗ್ರಾಮಗಳ ಜೊತೆಗೆ ವಿಲೀನ ಆಗಿದೆ. ಇದರಿಂದಲೂ ಕೂಡ ಮರಸಣಿಗೆ ಅಭಿವೃದ್ಧಿಗೆ ತೊಡಕಾಗಿದೆ ಎಂಬ ಆರೋಪ ಬಲವಾಗಿದೆ. ಈ ಹಿಂದೆ ಮರಸಣಿಗೆ ಪಂಚಾಯಿತಿಯು ಇಡಕಿಣಿ ತಾಲ್ಲೂಕು ಪಂಚಾಯಿತಿ ಕ್ಷೇತ್ರಕ್ಕೆ ಒಳಪಟ್ಟಿತ್ತು.
ಕಳಸ ತಾಲ್ಲೂಕು ಘೋಷಣೆಯ ಅಂತಿಮ ಅಧಿಸೂಚನೆಗೆ ಕ್ಷಣಗಣನೆ ನಡೆದಿದೆ. ಇಂತಹ ಸಂದರ್ಭದಲ್ಲಿ ಪ್ರಸ್ತಾಪಿತ ಕಳಸ ತಾಲ್ಲೂಕಿನ ಪ್ರದೇಶವಾದ ಮರಸಣಿಗೆಯನ್ನು ಮೂಡಿಗೆರೆ ತಾಲ್ಲೂಕಿನ ಬಾಳೂರು ಮತ್ತಿತರ ಗ್ರಾಮಗಳ ಜೊತೆಗೆ ವಿಲೀನ ಮಾಡಿ ತಾಲ್ಲೂಕು ಪಂಚಾಯಿತಿ ಕ್ಷೇತ್ರ ರಚಿಸಿರುವುದರಿಂದ ಭವಿಷ್ಯದಲ್ಲಿ ಸಮಸ್ಯೆ ಆಗಬಹುದು ಎಂಬ ಲೆಕ್ಕಾಚಾರವೂ ಇದೆ.
ಇದೇ 20ರಂದು ಜಿಲ್ಲಾಧಿಕಾರಿ ಕ್ಷೇತ್ರಗಳ ಪುನರ್ ವಿಂಗಡಣೆ ಸಂದರ್ಭದಲ್ಲಿ ಮರಸಣಿಗೆಯನ್ನು ಕಳಸ ಜಿಲ್ಲಾ ಪಂಚಾಯಿತಿ ಕ್ಷೇತ್ರ ಮತ್ತು ಇಡಕಿಣಿ ತಾಲ್ಲೂಕು ಪಂಚಾಯಿತಿ ಕ್ಷೇತ್ರಕ್ಕೆ ಸೇರಿಸಬೇಕು ಎಂಬ ಆಗ್ರಹ ಪಕ್ಷಾತೀತವಾಆಗಿ ಕೇಳಿಬರುತ್ತಿದೆ. ಶಾಸಕ ಎಂ.ಪಿ.ಕುಮಾರಸ್ವಾಮಿ ಕೂಡ ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿ ಗಮನ ಸೆಳೆದಿರುವುದಾಗಿ ಹೇಳಿದ್ದಾರೆ.
ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ವ್ಯಾಪ್ತಿ ಬಗ್ಗೆ ಜಿಲ್ಲಾಧಿಕಾರಿ ತಾತ್ಕಾಲಿಕ ಪಟ್ಟಿ ಬಿಡುಗಡೆ ಮಾಡುತ್ತಾರೆ. ಆಗ ಮರಸಣಿಗೆ ಕ್ಷೇತ್ರದ ಬಗ್ಗೆ ಸ್ಥಳೀಯರು ಆಕ್ಷೇಪಣೆ ಸಲ್ಲಿಸಲು ಅವಕಾಶ ಇದೆ ಎಂದು ಮೂಡಿಗೆರೆ ತಹಶೀಲ್ದಾರ್ ಎಚ್.ಎಂ. ರಮೇಶ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.