ಚಿಕ್ಕಮಗಳೂರು: ರಾಜ್ಯ ಸರ್ಕಾರವು ಮರಾಠಾ ಅಭಿವೃದ್ಧಿ ನಿಗಮ ರಚನೆ ಆದೇಶ ರದ್ದುಗೊಳಿಸಬೇಕು ಎಂದು ಕನ್ನಡಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನ ಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಕನ್ನಡಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಸಿ.ರಾಜೇಗೌಡ ಮಾತನಾಡಿ, ‘ಕೋವಿಡ್–19 ತಲ್ಲಣದಿಂದಾಗಿ ಜನರು ಸಂಕಷ್ಟ ದಲ್ಲಿದ್ದಾರೆ. ಬಿಬಿಎಂಪಿ ನೌಕರರಿಗೆ ಸರ್ಕಾರ ವೇತನ ನೀಡಿಲ್ಲ. ಕನ್ನಡಿಗರ ಸಮಸ್ಯೆಗೆ ಸರ್ಕಾರ ಸ್ಪಂದಿಸಿಲ್ಲ. ಮರಾಠಾ ಅಭಿವೃದ್ಧಿ ನಿಗಮ ರಚಿಸಲು ಹಾಗೂ ನಿಗಮಕ್ಕೆ ₹ 50 ಕೋಟಿ ಅನುದಾನ ಮಂಜೂರು ಮಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶಿದ್ದಾರೆ. ಮುಖ್ಯಮಂತ್ರಿ ಅವರು ಎಚ್ಚೆತ್ತು ಕೊಳ್ಳಬೇಕು. ನಿಗಮ ರಚನೆ ಆದೇಶ ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ಜಿಲ್ಲಾ ಘಟಕದ ಅಧ್ಯಕ್ಷ ನೂರುಲ್ಲಾ ಖಾನ್ ಮಾತನಾಡಿ, ‘ಸರ್ಕಾರದ ನಿಲುವು ಖಂಡಿಸಿ ರಾಜ್ಯದಾದ್ಯಂತ ಡಿ. 5ರಂದು ಪ್ರತಿಭಟನೆ ನಡೆಸಲಾಗುವುದು’ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಾಗರ ಹೋಬಳಿ ಅಧ್ಯಕ್ಷ ಕಳವಾಸೆ ರವಿ, ಡಾ.ರಾಜ್ಕುಮಾರ್ ಅಭಿಮಾನಿ ಗಳ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಓಂಕಾರೇಗೌಡ, ಕನ್ನಡ ಸೇನೆಯ ನಿಲೇಶ್, ಶಂಕರೇ ಗೌಡ, ಹೇಮಂತ್, ತಿಮ್ಮಣ್ಣ ಇದ್ದರು.