ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿಯ ಶಂಕರಾಚಾರ್ಯ ವೃತ್ತದಲ್ಲಿನ ಮಂಟಪದ ಗೋಪುರದಲ್ಲಿ ಹಸಿರು, ಕೇಸರಿ, ತಿಳಿ ನೀಲಿ ಬಣ್ಣದ ಬಟ್ಟೆ ಗುರುವಾರ ಬೆಳಿಗ್ಗೆಕಂಡುಬಂದಿದ್ದು, ಗೊಂದಲ ಸೃಷ್ಟಿಸಿದೆ.
ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಹಿಂದೂ ಸಂಘಟನೆಗಳವರು ಆಕ್ರೋಶ ವ್ಯಕ್ತಪಡಿಸಿದರು.
‘ಶಂಕರಾಚಾರ್ಯರ ಪ್ರತಿಮೆ ಮೇಲೆ ಎಸ್ಡಿಪಿಐ ಬಾವುಟ ಹಾಕುತ್ತಾರೆ ಎಂದರೆ ಏನರ್ಥ.ಕೃತ್ಯ ಎಸಗಿರುವ ಕಿಡಿಗೇಡಿಗಳನ್ನು ತಕ್ಷಣವೇ ಬಂಧಿಸಬೇಕು’ ಎಂದು ಬಿಜೆಪಿ ಮುಖಂಡ ಡಿ.ಎನ್.ಜೀವರಾಜ್ ಸಹಿತ ಇತರರು ಒತ್ತಾಯಿಸಿದರು. ಜೀವರಾಜ್ ಮತ್ತು ಪೊಲೀಸರ ಮಾತುಕತೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
‘ಶಂಕರಾಚಾರ್ಯರ ಪ್ರತಿಮೆ ಇರುವ ಗೋಪುರದ ಮೇಲೆ ಮುಸ್ಲಿಂ ಸಂಘಟನೆಯ ಬಾವುಟವನ್ನು ಅವಮಾನಕರವಾಗಿ ಹಾಕಲಾಗಿದೆ. ಎಸ್ಡಿಪಿಐ ಸದಸ್ಯರೇ ಇದನ್ನ ಹಾಕಿದ್ದಾರೆ. ಕೃತ್ಯಎಸಗಿದ ಆರೋಪಿಗಳನ್ನು ತಕ್ಷಣ ಬಂಧಿಸಬೇಕು’ ಎಂದು ಶೃಂಗೇರಿಯ ಅರ್ಜನ್ ಎಂಬಾತ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಸಚಿವ ಸಿ.ಟಿ. ರವಿ ಮತ್ತು ಶಾಸಕ ಎಸ್.ಎ. ರಾಮದಾಸ್ ಅವರು ಟ್ವಿಟರ್ನಲ್ಲಿಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶೃಂಗೇರಿಯಲ್ಲಿ ಶ್ರೀ ಶಂಕರಾಚಾರ್ಯರ ಪ್ರತಿಮೆಯ ಮೇಲೆ ಎಸ್ಡಿಪಿಐ ಧ್ವಜ ಹಾರಿಸಿದ್ದಾರೆ ಎಂಬ ವಿಷಯ ತಿಳಿದು ಬಂದಿದ್ದು ಜಿಲ್ಲಾ ಪೊಲೀಸ್ ಮುಖ್ಯ ಅಧಿಕಾರಿಗಳಿಗೆ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ. ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲರೂ ಸಹಕರಿಸಿ🙏