ಚಿಕ್ಕಮಗಳೂರು: ಮಳೆ ಹಾನಿ ವೀಕ್ಷಣೆಗೆ ಕೊಡಗು ಜಿಲ್ಲೆಗೆ ಅ.18ರಂದು ತೆರಳಿದ್ದಾಗ ಕಪ್ಪು ಬಾವುಟ ಪ್ರದರ್ಶಿಸಿದ್ದು ಸರ್ಕಾರದ ಪ್ರಾಯೋಜಿತ ಪಿತೂರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾನೂನು- ಸುವ್ಯವಸ್ಥೆ ಕಾಪಾಡಲು ವಿಫಲರಾಗಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.
ತಾಲ್ಲೂಕಿನ ಬಾಸಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೇ 26ರಂದು ಪ್ರತಿಭಟನೆ ಮಾಡುತ್ತೇವೆ. ಎಸ್ಪಿ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧರಿದ್ದೇವೆ ಎಂದು ತಿಳಿಸಿದರು.
'ಬಿಜೆಪಿಯವರು ಹತಾಶರಾಗಿದ್ದಾರೆ. ಏನೋ ನೆಪಮಾಡಿಕೊಂಡು ಮಡಿಕೇರಿಯಲ್ಲಿ ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ. ಇದು ಹೇಡಿತನದ ಕೃತ್ಯ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭದ್ರತೆ ಒದಗಿಸಲು ವಿಫಲರಾಗಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದು ದಪ್ಪ ಚರ್ಮದ ಸರ್ಕಾರ. ಮಳೆಹಾನಿ ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸಿಲ್ಲ. ಕೆಲ ಸಂತ್ರಸ್ತರಿಗೆ ವಿತರಿಸಿರುವ ಪರಿಹಾರ ಚೆಕ್ ಗಳು ಬೌನ್ಸ್ ಆಗಿವೆ' ಎಂದು ಆರೋಪಿಸಿದರು.