ಚಿಕ್ಕಮಗಳೂರು: ವಿವಾಹಿತ ಗ್ರಾಮಲೆಕ್ಕಿಗ ಡಿ.ಟಿ. ಶ್ರೀನಿಧಿ ಎಂಬವರನ್ನು ಮದುವೆಯಾಗಿರುವ ಕುರಿತು ಎನ್.ಆರ್.ಪುರ ತಹಶೀಲ್ದಾರ್ ಸಿ.ಜಿ.ಗೀತಾ ಅವರಿಗೆ ಷೋ ಕಾಸ್ (ಕಾರಣ ಕೇಳಿ) ನೋಟಿಸ್ ಜಾರಿಗೊಳಿಸಲಾಗಿದೆ.
ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಅವರು ನೋಟಿಸ್ ಜಾರಿಗೊಳಿಸಿದ್ದಾರೆ. ವಿವಾಹಿತ ಶ್ರೀನಿಧಿ ಅವರನ್ನು ಮದುವೆಯಾಗಿವುದಕ್ಕೆ ನಿಮ್ಮ ಸಮರ್ಥನೆ ಏನು? ಉಪನೋಂದಣಾಧಿಕಾರಿ ಕಚೇರಿಯಲ್ಲಿ ಸಲ್ಲಿಸಿರುವ ವಿವಾಹ ಮನವಿ ಅರ್ಜಿಯಲ್ಲಿ ಕಾಲಂ 4(ಜಿ) ನಲ್ಲಿ ನೀವು ‘ಅವಿವಾಹಿತೆ’ ಎಂದು ಮಾಹಿತಿ ನೀಡಿದ್ದೀರಿ, ಅದಕ್ಕೆ ನಿಮ್ಮ ವಿವರಣೆ ಏನು? ಎಂದು ಕೇಳಲಾಗಿದೆ.
ನೋಟಿಸ್ ತಲುಪಿದ ಏಳು ದಿನಗಳೊಳಗೆ ಸಮರ್ಥನೆ ನೀಡಬೇಕು. ತಪ್ಪಿದರೆ ನಿಯಮಾನುಸಾರ ಕ್ರಮ ಜರುಗಿಸಲಾಗುವುದು ಎಂದು ತಿಳಿಸಲಾಗಿದೆ.
ಗೀತಾ ಮತ್ತು ಶ್ರೀನಿಧಿ ಅವರು ಎನ್.ಆರ್.ಪುರದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಈ ವರ್ಷ ಜುಲೈ 19ರಂದು ನೋಂದಣಿ ವಿವಾಹ ಮಾಡಿಕೊಂಡಿದ್ದಾರೆ ಎಂದು ಶ್ರೀನಿಧಿ ಪತ್ನಿ ದೂರು ನೀಡಿದ್ದಾರೆ.
ಪತ್ನಿಯಿಂದ ದೂರು: ದಾವಣಗೆರೆಯ ಉಪನೋಂದಣಾಧಿಕಾರಿ ಕಚೇರಿಯಲ್ಲಿ 2006ರಲ್ಲಿ ಶ್ರೀನಿಧಿ ಅವರೊಂದಿಗೆ ನನ್ನ ವಿವಾಹವಾಗಿತ್ತು, ನಮಗೆ ಇಬ್ಬರು ಮಕ್ಕಳು ಇದ್ದಾರೆ ಎಂದು ಪತ್ನಿ ತಿಳಿಸಿದ್ದಾರೆ. ಪತಿ ಶ್ರೀನಿಧಿ ಮಾನಸಿಕ, ದೈಹಿಕ ಹಿಂಸೆ ನೀಡುತ್ತಿದ್ದರಿಂದ ಕಡೂರು ಠಾಣೆಯಲ್ಲಿ ದೂರು ದಾಖಲಿಸಿದ್ದೆ. ಮತ್ತೆ ರಾಜಿ ಮೂಲಕ ಒಂದಾಗಿದ್ದೆವು ಎಂದು ಶ್ರೀನಿಧಿ ಪತ್ನಿ ತಿಳಿಸಿದ್ದಾರೆ. ಶ್ರೀನಿಧಿ ಅವರು ಹಿರಿಯ ಸಿವಿಲ್ ಕೋರ್ಟ್ನಲ್ಲಿ ವಿವಾಹ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
***
ನೋಟಿಸ್ ನನಗೆ ತಲುಪಿಲ್ಲ. ತಲುಪಿದ ನಂತರ ಅದರಲ್ಲಿ ಏನಿದೆ ಎಂಬುದನ್ನು ಆಧರಿಸಿ ಸಮಜಾಯಿಷಿ ನೀಡುತ್ತೇನೆ.
– ಸಿ.ಜಿ.ಗೀತಾ, ತಹಶೀಲ್ದಾರ್, ಎನ್.ಆರ್.ಪುರ
ಗ್ರಾಮ ಲೆಕ್ಕಿಗನ ಕುಟುಂಬದವರ ದೂರು ನೀಡಿದ್ದಾರೆ. ತಹಶೀಲ್ದಾರ್ಗೆ ನೋಟಿಸ್ ನೀಡಲಾಗಿದೆ, ಅವರು ಸಮಜಾಯಿಷಿ ನೀಡಬೇಕು.
– ಕೆ.ಎನ್. ರಮೇಶ್, ಜಿಲ್ಲಾಧಿಕಾರಿ, ಚಿಕ್ಕಮಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.