ಚಿಕ್ಕಮಗಳೂರು: ಕಂದಾಯ ಇಲಾಖೆ ಎಂದರೆ ಮಾತೃ ಇಲಾಖೆ ಎಂದೇ ಕರೆಯಲಾಗುತ್ತದೆ. ಈ ಇಲಾಖೆಗೆ ಜಿಲ್ಲೆಯಲ್ಲಿ ಸಿಬ್ಬಂದಿ ಕೊರತೆ ಸಮಸ್ಯೆಯಾಗಿ ಕಾಡುತ್ತಿದೆ. ಐವರು ತಹಶೀಲ್ದಾರ್ಗಳು ಸೇರಿ 221 ಹುದ್ದೆಗಳು ಖಾಲಿ ಇವೆ.
ಒಂಬತ್ತು ಗ್ರೂಪ್ ಎ ತಹಶೀಲ್ದಾರ್ಗಳ ಹುದ್ದೆಗಳಿದ್ದು, ಎಲ್ಲವೂ ಭರ್ತಿಯಾಗಿವೆ. 10 ಗ್ರೂಪ್ ಬಿ ತಹಶೀಲ್ದಾರ್ ಹುದ್ದೆಗಳಿದ್ದು, ಐದು ಹುದ್ದೆಗಳು ಖಾಲಿ ಇವೆ. ಇದರ ಜತೆಗೆ ಚುನಾವಣಾ ತಹಶೀಲ್ದಾರ್ ಹುದ್ದೆ ಕೂಡ ಖಾಲಿಯೇ ಇದೆ. ಮೂಡಿಗೆರೆ, ಶೃಂಗೇರಿ, ಕೊಪ್ಪ, ತರೀಕೆರೆ ಮತ್ತು ಅಜ್ಜಂಪುರ ತಾಲ್ಲೂಕು ಕಚೇರಿಗಳಲ್ಲಿರುವ ಗ್ರೂಪ್ ಬಿ ತಹಶೀಲ್ದಾರ್ ಹುದ್ದೆಗಳು ಖಾಲಿ ಇವೆ.
ಗ್ರಾಮ ಮತ್ತು ಹೋಬಳಿ ಮಟ್ಟದಲ್ಲಿ ಕೆಲಸ ಮಾಡಬೇಕಾದ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳು ಹೆಚ್ಚಿನ ಸಂಖ್ಯೆಯಲ್ಲಿ ಖಾಲಿ ಇವೆ. ಮಂಜೂರಾಗಿರುವ 291 ಗ್ರಾಮ ಲೆಕ್ಕಿಗರ ಹುದ್ದೆಗಳ ಪೈಕಿ 41 ಹುದ್ದೆಗಳು ಖಾಲಿ ಇವೆ. ಕಚೇರಿಗಳಲ್ಲಿ ಕಡತ ವಿಲೇವಾರಿಗೆ ಪ್ರಮುವಾಗಿ ಬೇಕಿರುವ ಪ್ರಥಮ ದರ್ಜೆ ಮತ್ತು ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ.
ಮಂಜೂರಾಗಿರುವ 76 ಪ್ರಥಮ ದರ್ಜೆ ಸಹಾಯಕ ಹುದ್ದೆಗಳ ಪೈಕಿ 14 ಹುದ್ದೆ ಖಾಲಿ ಇದ್ದರೆ, 105 ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ಪೈಕಿ 40 ಹುದ್ದೆಗಳು ಖಾಲಿ ಇವೆ. ಡಿ ದರ್ಜೆ ನೌಕರರ ಹುದ್ದೆಗಳು 64 ಇದ್ದರೆ, 40 ಹುದ್ದೆ ಖಾಲಿ ಇವೆ. ಭರ್ತಿಯಾಗಿರುವ ಹುದ್ದೆಗಳಲ್ಲಿ ಬಹುತೇಕರು ಹೊರ ಗುತ್ತಿಗೆ ಸಿಬ್ಬಂದಿ ಇದ್ದಾರೆ.
ಚಿಕ್ಕಮಗಳೂರು ಮತ್ತು ತರೀಕೆರೆ ಉಪವಿಭಾಗಾಧಿಕಾರಿ ಕಚೇರಿಗಳಲ್ಲಿ ತಲಾ 15 ಮಂಜೂರಾತಿ ಹುದ್ದೆಗಳಿದ್ದು, ತಲಾ 8 ಹುದ್ದೆಗಳು ಭರ್ತಿಯಾಗಿದ್ದರೆ 7 ಹುದ್ದೆಗಳು ಖಾಲಿ ಇವೆ.
ಪೂರಕ ಮಾಹಿತಿ: ಬಾಲು ಮಚ್ಚೇರಿ, ಕೆ.ವಿ.ನಾಗರಾಜ್, ರವಿಕುಮಾರ್ ಶೆಟ್ಟಿಹಡ್ಲು, ಎಚ್.ಎಂ.ರಾಜಶೇಖರಯ್ಯ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.