ಚಿಕ್ಕಮಗಳೂರು: ‘ಮನುಷ್ಯರ ಸ್ವಾರ್ಥ ಅವರ ಅಸ್ತಿತ್ವದ ನಾಶಕ್ಕೆ ಕಾರಣವಾಗಲಿದೆ. ಅತಿಯಾಸೆ ಬಿಟ್ಟು ಸಮಷ್ಟಿಯ ಜತೆಗೆ ಬದುಕುವುದನ್ನು ಕಲಿಯಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದರು.
ಅರಣ್ಯ ಇಲಾಖೆ ವತಿಯಿಂದ 66 ನೇ ವನ್ಯ ಜೀವಿ ಸಪ್ತಾಹ ಅಂಗವಾಗಿ ನಗರದ ನೇತಾಜಿ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಸೈಕ್ಲೋತಾನ್ (ಸೈಕಲ್ ಜಾಥಾ) ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಪ್ರಕೃತಿಗೆ ಮನುಷ್ಯನ ಆಸೆಗಳನ್ನು ಈಡೇರಿಸುವ ಶಕ್ತಿ ಇದೆಯೇ ಹೊರತು ದುರಾಸೆಯನ್ನಲ್ಲ ಎಂದು ಮಹಾತ್ಮ ಗಾಂಧಿ ಹೇಳಿದ್ದರು. ಅರಣ್ಯ, ವನ್ಯಜೀವಿಗಳನ್ನು ರಕ್ಷಣೆ ಮಾಡಬೇಕು ಎಂದು ಹೇಳಿದರು.
ಪ್ರಕೃತಿ, ಜೀವ ವೈವಿಧ್ಯ, ವನ್ಯಜೀವಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವುದು ವನ್ಯಜೀವಿ ಸಪ್ತಾಹದ ಉದ್ದೇಶ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯು ಈ ಬಾರಿ ಭವಿಷ್ಯಕ್ಕಾಗಿ ರಣಹದ್ದುಗಳು ಎಂಬ ಪರಿಕಲ್ಪನೆಯಡಿ ಆನೆ ಪಥ ರಕ್ಷಣೆ ಜಿಲ್ಲೆಯ ಮುತ್ತೋಡಿಯಿಂದ ಬೆಂಗಳೂರಿಗೆ ತಲುಪುವ ಸೈಕಲ್ ಜಾಥಕ್ಕೆ ಚಾಲನೆ ನೀಡಲಾಗಿದೆ ಎಂದರು.
ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಸವರಾಜ್ ಚೇಂಗಟಿ ಮಾತನಾಡಿ ಕಾಡು ಇದ್ದರೆ ನಾಡು. ಕಾಡು ಕಡಿದು ತತ್ತರಿಸುವ ಸ್ಥಿತಿಗೆ ತಲುಪಿದ್ದೇವೆ. ಪರಿಸರ ಸಂರಕ್ಷಣೆ ಎಲ್ಲರ ಹೊಣೆ ಎಂದರು.
ಚಿಕ್ಕಮಗಳೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಸುನೀಲ್ ಪನ್ವಾರ್, ಭದ್ರಾ ಹುಲಿ ಯೋಜನೆ ನಿರ್ದೇಶಕ ತಾಕತ್ ಸಿಂಗ್ ರಾಣಾವತ್, ಡಿಎಫ್ಒ ಜಗನ್ನಾಥ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ಸಿ.ಶಿವ ಇದ್ದರು.