ಪ್ರತಿ ದಿನ ಕಲ್ಲು ಒಡೆದು ಜೀವಿಸುವ ಬಹಳಷ್ಟು ಕುಟುಂಬಗಳು ತಾಲ್ಲೂಕಿನ ಮಲ್ಲಿದೇವಿಹಳ್ಳಿ, ತುರುವನಹಳ್ಳಿ ಸೇರಿದಂತೆ ಕೆಲ ಗ್ರಾಮಗಳಲ್ಲಿದ್ದಾರೆ. ಮೂಲತಃ ತಮಿಳು ಭಾಷಿಕರಾದ ಈ ಕಾರ್ಮಿಕರು ಬೆಳಗ್ಗೆ 6 ಗಂಟೆಗೆ ಕಾಯಕ ಆರಂಭಿಸಿ ಮಧ್ಯಾಹ್ನ 2 ಗಂಟೆ ತನಕ ಕಲ್ಲು ಒಡೆಯುತ್ತಾರೆ. ಸೈಜು ಕಲ್ಲು, ಜಲ್ಲಿ, ಕಲ್ಲುಕಂಬ ಒಡೆಯುವವರು ತೆಂಗಿನ ಗರಿಗಳಿಂದ ಒಂದಿಷ್ಟು ನೆರಳು ಮಾಡಿಕೊಂಡರೂ ಚಪ್ಪಡಿ ಒಡೆಯುವವರು ಬಿರು ಬಿಸಿಲಲ್ಲೇ ಕೆಲಸ ಮಾಡಬೇಕು. ಚಪ್ಪಡಿ ತೆಗೆಯುವ ಮುನ್ನ ಅದಕ್ಕೆ ಉರುವಲು ಹಾಕಿ ಬೆಂಕಿ ಹಚ್ಚಿ ಕಾವು ಕೊಡುವ ಕಾರ್ಯವನ್ನೂ ಬಿಸಿಲಲ್ಲೇ ಮಾಡಬೇಕು. ಮೇಲೆ ಬಿರುಬಿಸಿಲು- ಕೆಳಗೆ ಸುಡು ಬೆಂಕಿ. ಕೆಲಸ ಮುಗಿದು ಮನೆಗೆ ಬಂದರೆ ಸವೆದ ಉಳಿ ಮುಂತಾದವುಗಳನ್ನು ಕುಲುಮೆಗೆ ಹಾಕಿ ಹರಿತಗೊಳಿಸುವ ಕಾರ್ಯವನ್ನು ಮಾಡಿಕೊಳ್ಳುತ್ತಾರೆ.