ನರಸಿಂಹರಾಜಪುರ : ಆಧುನಿಕ ಜೀವನ ಶೈಲಿಗೆ ಮಾರು ಹೋಗಿರುವ ಮಾನವ ನಡೆಯುವುದನ್ನೆ ಮರೆತು ಬಿಟ್ಟಿದ್ದಾನೆ. ಓಡಾಟಕ್ಕೆ ಸೈಕಲ್, ಬೈಕ್, ಕಾರು, ಬಸ್ ಮುಂತಾದ ವಾಹನಗಳನ್ನು ಅವಲಂಭಿಸಿದ್ದಾನೆ. ಆದರೆ ಇಲ್ಲೂಬ್ಬ ಕಾರು ಚಾಲಕ ಧರ್ಮಸ್ಥಳಕ್ಕೆ 17 ನೇ ಬಾರಿ ಪಾದ ಯಾತ್ರೆ ಕೈಗೊಂಡಿದ್ದಾರೆ.
ಮೂಲತಃ ಬೆಳಗಾವಿಯ ರಾಜೀವ್ ಗಾಂಧಿ ನಗರದ ನಿವಾಸಿ ದುಂಡಪ್ಪ ಹುಚ್ಚಪ್ಪ ಬೈಲವಾಡ ಎಂಬ ಕಾರು ಚಾಲಕ ಪಾದ ಯಾತ್ರೆಯ ಸಾಹಸ ಕೈಗೊಂಡಿದ್ದಾರೆ. ಧರ್ಮಸ್ಥಳಕ್ಕೆ ಹೋಗುವ ಮಾರ್ಗ ಮಧ್ಯೆ ಎನ್.ಆರ್.ಪುರದ ಸಿಂಹನಗದ್ದೆ ಬಸ್ತಿಮಠಕ್ಕೆ ಭೇಟಿ ನೀಡಿದ್ದ ಅವರು ‘ಪ್ರಜಾವಾಣಿ ’ ಯೊಂದಿಗೆ ತಮ್ಮ ಪಾದ ಯಾತ್ರೆಯ ಅನುಭವಗಳನ್ನು ಹಂಚಿಕೊಂಡರು.
ದುಂಡಪ್ಪ ಹುಚ್ಚಪ್ಪ ಬೈಲವಾಡ ಡಿಸೆಂಬರ್ 10, 1997 ರಿಂದ ಪ್ರತಿವರ್ಷ ಪಾದ ಯಾತ್ರೆ ಮೂಲಕ ಧರ್ಮ ಸ್ಥಳಕ್ಕೆ ಹೋಗಿ ಬರುವ ಅಭ್ಯಾಸ ಮಾಡಿಕೊಂಡಿದ್ದಾರೆ. ಬೆಳಗಾವಿ ಯಿಂದ ಧರ್ಮಸ್ಥಳಕ್ಕೆ ಸುಮಾರು 900 ಕಿಲೋಮೀಟರ್ ದೂರವಾಗುತ್ತದೆ. ಇದನ್ನು ನಡಿಗೆ ಮೂಲಕವೇ ಕ್ರಮಿಸುವುದು ವಿಶೇಷ. ಈ ಭಾರಿಯ ಸಹ ಡಿಸೆಂಬರ್ 25 ರಂದು ಬೆಳವಾಗಿಯಿಂದ ಧರ್ಮಸ್ಥಳ ಪಾದ ಯಾತ್ರೆ ಕೈಗೊಂಡಿದ್ದಾರೆ.
ಇದುವರೆಗೆ 16 ಭಾರಿ ಪಾದ ಯಾತ್ರೆಯ ಮೂಲಕ ಗೋಕರ್ಣ, ಇರುಗುಂಚಿ, ಕೊಲ್ಲೂರು, ಕುಂದಾಪುರ, ಉಡುಪಿ,ಕಟಿಲು, ಸೌತಡ್ಕ, ಸುಬ್ರಹ್ಮಣ್ಯ ದಿಂದ ಧರ್ಮಸ್ಥಳಕ್ಕೆ ಹೋಗಿ ಬರುತ್ತಿದ್ದರು. ಆದರೆ ಈ ಸಾಲಿನಲ್ಲಿ ಮಾರ್ಗವನ್ನು ಬದಲಾಯಿಸಿ ಬೆಳಗಾವಿ, ಬೈಲ ಹೊಂಗಲ, ಧಾರವಾಡ, ಹುಬ್ಬಳಿ, ಶಿಗ್ಗಾವಿ, ಕುಂದಗೋಳ,ಕಾಗಿನೆಲೆ, ರಾಣೆ ಬೆನ್ನೂರು, ಹೊನ್ನಾಳ್ಳಿ, ಬೀರನಕೆರೆ ಮಠ, ಶಿವಮೊಗ್ಗ, ಎನ್.ಆರ್.ಪುರ, ಕೊಪ್ಪ, ಶೃಂಗೇರಿ, ಬಾಳೆ ಹೊನ್ನೂರು,ಕಳಸ, ಹೊರನಾಡು, ಬಾಬುಬುಡನ್ ಗಿರಿ ಮೂಲಕ ಜನವರಿ 26ಕ್ಕೆ ಧರ್ಮಸ್ಥಳಕ್ಕೆ ತಲುಪುವ ಗುರಿ ಇಟ್ಟು ಕೊಂಡಿದ್ದೇನೆ ಎಂದು ತಿಳಿಸಿದರು.
ಪ್ರಸ್ತುತ 47 ವರ್ಷದ ಬೈಲವಾಡ ತಮಗೆ 30 ವರ್ಷ ವಯಸ್ಸಾ ದಾಗಿನಿಂದ ಪಾದಯಾತ್ರೆ ಮೂಲಕ ಧರ್ಮಸ್ಥಳಕ್ಕೆ ಹೋಗಿ ಬರುತ್ತಿದ್ದಾರೆ. ಇವರ ಈ ಧಾರ್ಮಿಕ ಕಾರ್ಯಕ್ಕೆ ಪತ್ನಿ ಬಸವ್ವ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಇವರಿಗೆ ಮೂವರು ಮಕ್ಕಳಿದ್ದಾರೆ. ಪ್ರತಿ ವರ್ಷ ಒಂದರಿಂದ ಎರಡು ತಿಂಗಳು ಪಾದ ಯಾತ್ರೆಗೆ ಮೀಸಲಿಡುತ್ತಾರೆ. ಪ್ರತಿ ಹಾಸದಲ್ಲೂ ಸುಮಾರು 1,200 ಕಿಲೋ ಮೀಟರ್ ಕ್ರಮಿಸುತ್ತಾರೆ. ಬೆಳಿಗ್ಗೆ 6ರಿಂದ 6.30 ವೇಳೆಗೆ ಪಾದ ಯಾತ್ರೆ ಪ್ರಾರಂಭಿಸುವ ಇವರು ಪ್ರತಿ ನಿತ್ಯ ಕನಿಷ್ಠ 25 ರಿಂದ ಗರಿಷ್ಟ 50 ಕಿ.ಮೀ ವರೆಗೂ ನಡೆಯು ತ್ತಾರೆ.
ಧಾರಿ ಮಧ್ಯೆ ಸಿಗುವ ದೇವಸ್ಥಾನಗಳು, ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ರಾತ್ರಿ ವೇಳೆ ದೇವಸ್ಥಾನ, ಪೊಲೀಸ್ ಠಾಣೆ ಆವರಣ, ಬಸ್ ನಿಲ್ದಾಣ, ಶಾಲಾ ಆವರಣದಲ್ಲಿ ವಿಶ್ರಮಿಸುತ್ತಾರೆ. ರಾತ್ರಿ 12 ರಿಂದ ಮಧ್ಯಾಹ್ನದ 12ರವರೆಗೆ 12 ಗಂಟೆಗಳ ಕಾಲ ಮೌನ ವ್ರತಾಚರಣೆ ಮಾಡುವ ಅಭ್ಯಾಸ ಬೆಳೆಸಿ ಕೊಂಡಿರುವ ಇವರು ಈ ಸಂದರ್ಭದಲ್ಲಿ ಎಂತಹ ಸಮಸ್ಯೆಗಳು ಎದುರಾದರೂ ಮಾತನಾ ಡುವುದಿಲ್ಲ ಎನ್ನುತ್ತಾರೆ. ಬೆಳಿಗ್ಗೆ ದಾರಿ ಮಧ್ಯೆ ಸಿಗುವ ಹೋಟೆಲ್ ಗಳಲ್ಲಿ ತಿಂಡಿ ಮಾಡುತ್ತಾರೆ. ಮಧ್ಯಾಹ್ನದ ಊಟ ಮಾಡುವುದಿಲ್ಲ, ರಾತ್ರಿ ಮಾಡುವ ಅಭ್ಯಾಸ ಬೆಳಿಸಿ ಕೊಂಡಿದ್ದಾರೆ. ಹಣಕ್ಕಾಗಿ ಯಾರ ಬಳಿಯೂ ಬೇಡುವುದಿಲ್ಲ. ಹಣ ಪಡೆದರೆ ಭಕ್ತಿ ಹೋಗಿ ವ್ಯಾಮೋಹ ಹೆಚ್ಚುತ್ತದೆ. ಹಾಗಾಗಿ ತಮ್ಮ ದುಡಿಮೆಯ ಹಣವನ್ನೆ ಮೀಸಲಿಡುತ್ತೇನೆ ಎನ್ನುತ್ತಾರೆ.
ಹಲವಾರು ವರ್ಷಗಳಿಂದ ಕಾರಿನಲ್ಲಿ ಧಾರ್ಮಿಕ ಸ್ಥಳಕ್ಕೆ ಪ್ರವಾಸಿಗರನ್ನು ಕರೆದುಕೊಂಡು ಹೋಗುತ್ತಿದ್ದ ಇವರಿಗೆ ಧರ್ಮಸ್ಥಳಕ್ಕೆ ಹೋಗಿ ಬರುವ ಆಲೋಚನೆ ಹೊಳೆಯಿತು. ಮನಸ್ಸಿಗೆ ನೆಮ್ಮದಿಗಾಗಿ ಹಾಗೂ ಲೋಕ ಕಲ್ಯಾಣಾರ್ಥಕ್ಕಾಗಿ ಪಾದಯಾತ್ರೆ ಕೈಗೊಳ್ಳುತ್ತಿದ್ದೇನೆ. 12 ನೇ ಬಾರಿಗೆ ಪಾದಯಾತ್ರೆ ನಿಲ್ಲಿಸ ಬೇಕೆಂದಿದ್ದೇನೆ ವಿರೇಂದ್ರ ಹೆಗ್ಗಡೆಯವರು 21 ವರ್ಷ ದವರೆಗೆ ಬರಬೇಕೆಂದು ಹೇಳಿದ್ದಾರೆ. ಹಾಗಾಗಿ ಇನ್ನೂ 4 ವರ್ಷಗಳ ಕಾಲ ಪಾದಯಾತ್ರೆ ಕೈಗೊಳ್ಳುತ್ತೇನೆ ಎಂದು ತಿಳಿಸುತ್ತಾರೆ.
ಪಾದಯಾತ್ರೆಯನ್ನು ಕಂಡು ಕೆಲವರು ಹೋಗಳಿದ್ದಾರೆ, ಕೆಲವರು ತೆಗಳಿದ್ದಾರೆ. ಹಾಗೆಯೇ ಎಂತಹ ಸಹಾಸ ಎಂದು ಸಾಧನೆ ಎಂದು ಕೊಂಡಾಡಿದ್ದಾರೆ ಎನ್ನುತ್ತಾರೆ. ಕನ್ನಡ, ಹಿಂದಿ ಮರಾಠಿ ಮುಂತಾದ ಭಾಷೆಗಳನ್ನು ಮಾತ ನಾಡುತ್ತಾರೆ. ಸಂಪರ್ಕ ಸಂಖ್ಯೆ– 9845727578.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.