ಭರಮಸಾಗರ: ಸಮೀಪದ ಕಾಲ್ಗೆರೆ ಗ್ರಾಮದಲ್ಲಿ ಈಚೆಗೆ ಮದುವೆ ಸಮಾರಂಭದಲ್ಲಿ ಭೋಜನ ಮಾಡಿದ 30 ಜನರು ಅಸ್ವಸ್ಥರಾಗಿದ್ದಾರೆ.
ಗ್ರಾಮಸ್ಥರೊಬ್ಬರ ಮನೆಯಲ್ಲಿ ಗುರುವಾರ ಮದುವೆ ಸಮಾರಂಭದ ಬೀಗರ ಊಟ ಆಯೋಜಿಸಲಾಗಿತ್ತು. 60 ಮಂದಿ ಊಟ ಮಾಡಿದ್ದರು. ಅವರ ಪೈಕಿ ಕೆಲವರು ಅಸ್ವಸ್ಥಗೊಂಡು ಶುಕ್ರವಾರ ಭರಮಸಾಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಂಜೆ ವೇಳೆಗೆ ಅಸ್ವಸ್ಥರ ಸಂಖ್ಯೆ ಹೆಚ್ಚಾದ ಕಾರಣ ಅವರನ್ನು ಕಾಲ್ಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿದೆ. ಕೆಲವರು ದಾವಣಗೆರೆ ಚಿಗಟೇರಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಲ್ಲೂಕು ಆರೋಗ್ಯಾಧಿಕಾರಿ ಬಿ.ವಿ. ಗಿರೀಶ್, ಡಿಎಸ್ಒ ಕಂಬಳಿಮಠ ಕಾಲ್ಗೆರೆ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.
ಭರಮಸಾಗರ ಸಮುದಾಯ ಆರೋಗ್ಯ ಕೇಂದ್ರದಲ್ಲೂ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ತುರ್ತು ಸೇವೆಗೆ ನಾಲ್ಕು ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಿ. ಶ್ರೀಧರ್ ತಿಳಿಸಿದ್ದಾರೆ.
ಕೆಪಿಸಿಸಿ ಉಪಾಧ್ಯಕ್ಷ ಎಚ್. ಆಂಜನೇಯ ಶನಿವಾರ ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥರ ಆರೋಗ್ಯ ವಿಚಾರಿಸಿದರು.
ಕೆಪಿಸಿಸಿ ಕಾರ್ಯದರ್ಶಿ ಎಚ್.ಎನ್. ತಿಪ್ಪೇಸ್ವಾಮಿ, ಬಿ.ಟಿ. ನಿರಂಜನಮೂರ್ತಿ, ದುರ್ಗೇಶ್ಪೂಜಾರ್, ಎಸ್.ಬಿ. ಹನುಮಂತಪ್ಪ, ಇಮ್ತಿಯಾಜ್, ಮಧು, ಪ್ರಶಾಂತ್ ಇದ್ದರು.
ಭರಮಸಾಗರ ಸಮೀಪದ ಕಾಲ್ಗೆರೆಯಲ್ಲಿ ಮದುವೆ ಊಟ ಸೇವಿಸಿ ಅಸ್ವಸ್ಥಗೊಂಡವರ ಆರೋಗ್ಯವನ್ನು ಕೆಪಿಸಿಸಿ ಉಪಾಧ್ಯಕ್ಷ ಎಚ್. ಆಂಜನೇಯ ಶನಿವಾರ ವಿಚಾರಿಸಿದರು