ಹೊಸದುರ್ಗ: ಆಸ್ತಿ ಮಾರ್ಟ್ಗೇಜ್ ವಿಚಾರಕ್ಕೆ ಲಂಚಕ್ಕೆ ಬೇಡಿಕೆಯಿಟ್ಟಿದ್ದ ತಾಲ್ಲೂಕು ಉಪನೋಂದಣಾಧಿಕಾರಿ ಕಚೇರಿಯ ಪ್ರಭಾರ ಉಪನೋಂದಣಾಧಿಕಾರಿ ಬುಧವಾರ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಪಟ್ಟಣದ ಕಚೇರಿಯಲ್ಲಿ ಪ್ರಭಾರ ಉಪನೋಂದಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪಿ. ಮಂಜುನಾಥ್, ಗುರುಪ್ರಸಾದ್ ಎಂಬುವರ ಬಳಿ ₹ 4 ಸಾವಿರ ಲಂಚ ಸ್ವೀಕರಿಸುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.
ಹೊಸದುರ್ಗ ಪಟ್ಟಣದ ಡಿ.ಎಚ್. ಗುರುಪ್ರಸಾದ್ ತಮ್ಮ ಆಸ್ತಿಯನ್ನು ಆಧಾರ ನೋಂದಣಿ ಮಾಡಿಸಲು ತಾಲ್ಲೂಕು ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಶುಲ್ಕ ಪಾವತಿಸಿದ್ದಾರೆ. ಫೆ. 24 ರಂದು ಮಧ್ಯಾಹ್ನ 3ಕ್ಕೆ ಆಧಾರ ನೋಂದಣಿ (ಮಾರ್ಟ್ಗೇಜ್) ಮಾಡಿಕೊಟ್ಟ ಪ್ರಭಾರ ಉಪನೋಂದಣಾಧಿಕಾರಿ ಮಂಜುನಾಥ್ ₹ 5 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತು ಗುರುಪ್ರಸಾದ್ ಮಾರ್ಚ್ 2ರಂದು ಎಸಿಬಿಗೆ ದೂರು ನೀಡಿದ್ದರು.
ಎಸಿಬಿ ಪ್ರಭಾರ ಪೊಲೀಸ್ ಅಧಿಕಾರಿ ಕಲಾ ಕೃಷ್ಣಮೂರ್ತಿ ಇವರ ಮಾರ್ಗದರ್ಶನದಲ್ಲಿ ಪಿಐ ಪ್ರವೀಣ್ ನೇತೃತ್ವದ ತಂಡ ದಾಳಿ ನಡೆಸಿ ಪಿ. ಮಂಜುನಾಥ ಅವರನ್ನು ದಸ್ತಗಿರಿ ಮಾಡಿದ್ದಾರೆ. ಸಿಬ್ಬಂದಿಗಳಾದ ಎ. ಮಾರುತಿರಾಂ, ಓಬಣ್ಣ, ಹರೀಶ್ ಕುಮಾರ್, ಫಕ್ರುದ್ದಿನ್, ಯತಿರಾಜ, ಫಯಾಜ್ ಇದ್ದರು.