ಸಿರಿಗೆರೆ: ‘ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಮತ್ತೊಮ್ಮೆ ಬಿಜೆಪಿ ಪಕ್ಷಕ್ಕೆ ಭಾರೀ ಜಯ ಸಿಗುತ್ತದೆ’ ಎಂದು ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ತಿಳಿಸಿದರು.
‘ಸಿರಿಗೆರೆಯಲ್ಲಿ ಗುರುವಾರ ಸಂಜೆ ಮಾಧ್ಯಮದವರೊಡನೆ ಮಾತನಾಡಿದ ಅವರು ಈಗಾಗಲೇ ಒಮ್ಮೆ ಚಿತ್ರದುರ್ಗ ಲೋಕಸಭಾ ಕ್ಷೇತ್ರವನ್ನು ಸುತ್ತು ಹಾಕಿದ್ದೇವೆ. ಎಲ್ಲೆಡೆ ಬಿಜೆಪಿ ಬಗ್ಗೆ ಮತದಾರರಲ್ಲಿ ಒಲವು ಇದೆ’ ಎಂದರು.
‘ಪ್ರಧಾನಿ ಮೋದಿ ಅವರು ಹತ್ತು ವರ್ಷಗಳಲ್ಲಿ ಜಾರಿಗೆ ತಂದಿರುವ ಜನಪರ ಕಾರ್ಯಕ್ರಮಗಳ ಬಗ್ಗೆ ಮತದಾರರು ವಿಶ್ವಾಸ ತಾಳಿದ್ದಾರೆ. ದೇಶದ ಭದ್ರತೆ ಮತ್ತು ಅಖಂಡತೆಯನ್ನು ಕುರಿತು ಜನರು ಯೋಚಿಸುತ್ತಿದ್ದಾರೆ. ಈ ಬಾರಿ ಗೆಲುವು ನಮಗೇ ಸಿಗಲಿದೆ’ ಎಂದರು.
ನಾಳೆ ಎಚ್ಡಿಕೆ ಪ್ರವಾಸ: ‘ಜೆಡಿಎಸ್ ಮುಖಂಡ ಎಚ್.ಡಿ. ಕುಮಾರಸ್ವಾಮಿ ಶುಕ್ರವಾರ ಹೊಳಲ್ಕೆರೆ ಕ್ಷೇತ್ರದ ನಾಲ್ಕು ಕಡೆ ಬಿಜೆಪಿ ಅಭ್ಯರ್ಥಿಯ ಪರ ಪ್ರಚಾರ ಮಾಡಲಿದ್ದಾರೆ. 24ರಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರು ಸಹ ಕ್ಷೇತ್ರದಲ್ಲಿ ಪ್ರಚಾರ ಮಾಡಲಿದ್ದಾರೆ’ ಎಂದು ತಿಳಿಸಿದರು.
ಸ್ಥಳೀಯ ಬಿಜೆಪಿ ಮುಖಂಡ ಕೆ.ಎನ್. ಬಸವಂತಪ್ಪ ಅವರನ್ನು ಭೇಟಿ ಮಾಡಿದ್ದ ಕಾರಜೋಳ, ಚುನಾವಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಮನವಿ ಮಾಡಿದರು. ಸ್ಥಳೀಯ ಮುಖಂಡರಾದ ಶೈಲೇಶ್, ಕೆ.ಎನ್. ಮೋಹನ್, ಹಂಚಿನಮನೆ ಸಂದೀಪ ಮುಂತಾದವರು ಜೊತೆಗಿದ್ದರು.