ನಾಯಕನಹಟ್ಟಿ: ಮಹಿಳಾ ದೌರ್ಜನ್ಯದ ಬಗ್ಗೆ ದೂರು ನೀಡಿದ 15 ದಿನಗಳಲ್ಲಿ ಪರಿಹಾರ ನೀಡಲಾಗುವುದು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ ಆರ್.ಪ್ರಮೀಳಾ ನಾಯ್ಡು ಹೇಳಿದರು.
ಪಟ್ಟಣದ ಗುರುತಿಪ್ಪೇರುದ್ರಸ್ವಾಮಿ ದೇವಾಲಯಕ್ಕೆ ಶುಕ್ರವಾರ ಭೇಟಿ ನೀಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
‘ಇತ್ತೀಚೆಗೆ ಮಹಿಳಾ ದೌರ್ಜನ್ಯಗಳು ಹೆಚ್ಚುತ್ತಿವೆ. ಮದುವೆಯ ನಂತರ ಭಿನ್ನಾಭಿಪ್ರಾಯಗಳಿಂದ ಕೆಲವರ ದಾಂಪತ್ಯದಲ್ಲಿ ಬಿರುಕು ಉಂಟಾಗುತ್ತಿದೆ. ಮದುವೆಯಾದವರು ಹಕ್ಕುಗಳ ಬಗ್ಗೆ ಮಾತನಾಡುತ್ತ ಜವಾಬ್ದಾರಿ ಮರೆಯುತ್ತಾರೆ’ ಎಂದರು.
‘ಸಾರ್ವಜನಿಕ ಸ್ಥಳಗಳಲ್ಲಿ ಮಹಿಳಾ ದೌರ್ಜನ್ಯ ಕಾನೂನುಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಗಾರ್ಮೆಂಟ್ ಉದ್ಯಮದಲ್ಲಿ ಅನೇಕ ಮಹಿಳೆಯರು ದುಡಿಯುತ್ತಿದ್ದಾರೆ. ಕಡಿಮೆ ವೇತನಕ್ಕೆ ದುಡಿಯುವ ಇಂಥ ಉದ್ಯಮಗಳಲ್ಲಿ ದೌರ್ಜನ್ಯ ಹೆಚ್ಚಾಗಿದ್ದು, 10ಕ್ಕಿಂತ ಹೆಚ್ಚು ಉದ್ಯೋಗಿಗಳಿರುವ ಸಂಸ್ಥೆಗಳಲ್ಲಿ ಉಸ್ತುವಾರಿ ಸಮಿತಿ ರಚಿಸುವಂತೆ ಆದೇಶವಿದೆ. ಈ ಸಮಿತಿಗೆ ದೂರು ನೀಡಿಯೂ ಪರಿಹಾರ ದೊರೆಯದಿದ್ದರೆ ಆಯೋಗಕ್ಕೆ ದೂರು ನೀಡಬಹುದು’ ಎಂದು ಅವರು ತಿಳಿಸಿದರು
ಈ ವರ್ಷ ರಾಜ್ಯ ಮಹಿಳಾ ಆಯೋಗ ಆರಂಭವಾಗಿ 15 ವರ್ಷ ತುಂಬಿದ್ದು, ಆಚರಣೆಗೆ ನಿರ್ಧರಿಸಲಾಗಿದೆ. 24 ಗಂಟೆ ಮಹಿಳಾ ರಕ್ಷಣೆ ಕೇಂದ್ರ ಹೊಂದುವ ಉದ್ದೇಶ ಹೊಂದಲಾಗಿದೆ ಎಂದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಭಾರತಿ, ಸೌಮ್ಯ ದೇವಾಲಯದ ಇಒ ಎಚ್.ಗಂಗಾಧರಪ್ಪ, ಸಿಬ್ಬಂದಿ ಎಸ್. ಸತೀಶ್ ಇದ್ದರು.