ಮೊಳಕಾಲ್ಮುರು: ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕಲ್ಲಿ ಮತ್ತೆ ಮೊಳಕಾಲ್ಮುರು ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದರು.
ವಿಧಾನಸಭಾ ಕ್ಷೇತ್ರದ ಹನುಮಂತನಹಳ್ಳಿಯಲ್ಲಿ ಗುರುವಾರ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಕ್ಷೇತ್ರದಲ್ಲಿ ನನ್ನ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಅನಿವಾರ್ಯ ಕಾರಣಗಳಿಂದಾಗಿ ಕ್ಷೇತ್ರ ಬಿಟ್ಟು ಬಳ್ಳಾರಿ ಜಿಲ್ಲೆಯಿಂದ ಸ್ಪರ್ಧಿಸಬೇಕಾಯಿತು. ಆದರೆ, ಅಲ್ಲಿ ನನ್ನನ್ನು ಸೋಲಿಸಿದರು. ಸೋಲಿನಿಂದ ನಾನು ಹತಾಶನಾಗುವುದಿಲ್ಲ’ ಎಂದರು.
‘ಮೊಳಕಾಲ್ಮುರು ಕ್ಷೇತ್ರ ತೊರೆದು ಹೋದರೂ ನನ್ನ ಮೇಲಿನ ಜನರ ಪ್ರೀತಿ ಸ್ವಲ್ಪವೂ ಕಡಿಮೆಯಾಗಿಲ್ಲ. ಸಾಕಷ್ಟು ಕಾರ್ಯಕ್ರಮಗಳಿಗೆ ಆಹ್ವಾನಿಸುತ್ತಾರೆ. ಮನೆಗೂ ಅನೇಕರು ಬಂದು ಹೋಗುತ್ತಾರೆ. ರಾಜಕೀಯವಾಗಿ ಮರುಜೀವ ನೀಡಿದ ಕ್ಷೇತ್ರವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಮತ್ತೆ ಇಲ್ಲಿಗೆ ಬಂದು ಜನರ ಖುಣ ತೀರಿಸುವ ಕೆಲಸ ಮಾಡುತ್ತೇನೆ’ ಎಂದು ಹೇಳಿದರು.
ಬಿಜೆಪಿ ಮುಖಂಡ ಚನ್ನಗಾನಹಳ್ಳಿ ಮಲ್ಲೇಶ್, ಮಂಡಲಾಧ್ಯಕ್ಷ ಡಾ.ಪಿ.ಎಂ. ಮಂಜುನಾಥ್, ಇ.ರಾಮರೆಡ್ಡಿ, ಮುಖಂಡರಾದ ಸಿದ್ಧಾರ್ಥ್, ಪಾಪೇಶ್ ನಾಯಕ್, ಟಿ. ರೇವಣ್ಣ ಇದ್ದರು.