ಚಿತ್ರದುರ್ಗ: ಕೊರೊನಾ ಸೋಂಕು ತಗುಲಿದ್ದರಿಂದ ಇಲ್ಲಿನ ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 110 ವರ್ಷದ ಅಜ್ಜಿ ಸಿದ್ಧಮ್ಮ, ಕೇವಲ ಐದು ದಿನಗಳಲ್ಲಿ ರೋಗದಿಂದ ಗುಣಮುಖರಾಗಿದ್ದಾರೆ. ಹೀಗಾಗಿ ಅಜ್ಜಿಯನ್ನು ಶನಿವಾರ ಆಸ್ಪತ್ರೆಯಿಂದ ಮನೆಗೆ ಕಳುಹಿಸಿಕೊಡಲಾಯಿತು.
ಕೋವಿಡ್ ಜಯಿಸಿದ ಅವರ ಮುಖದಲ್ಲಿ ಸಂತಸ ಅರಳಿತ್ತು. ಇಲ್ಲಿನ ಪೊಲೀಸ್ ಕ್ವಾಟರ್ಸ್ ನಿವಾಸಿಯಾಗಿರುವ ಅವರು ಜುಲೈ 27ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಐದು ದಿನಗಳಲ್ಲೇ ಅಜ್ಜಿ ಗುಣಮುಖರಾಗಿರುವುದಕ್ಕೆ ವೈದ್ಯರ ಮೊಗದಲ್ಲೂ ಸಂತಸದ ಬೆಳಕು ಪ್ರತಿಫಲಿಸುತ್ತಿತ್ತು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಬಸವರಾಜ್ ಸೇರಿ ಆರೋಗ್ಯ ಇಲಾಖೆ ಸಿಬ್ಬಂದಿ ಆತ್ಮೀಯವಾಗಿ ಅಜ್ಜಿಯನ್ನು ಬೀಳ್ಕೊಟ್ಟರು.
ಸುದ್ದಿಗಾರರೊಂದಿಗೆ ಮಾತನಾಡಿದ ಅಜ್ಜಿ, ‘ನಾನು ಜೀವನದಲ್ಲಿ ಯಾವುದಕ್ಕೂ ಹೆದರಿಕೊಂಡಿಲ್ಲ. ಹೀಗಾಗಿ ಕೊರೊನಾಕ್ಕೂ ಭಯಪಡಲಿಲ್ಲ. ಇದೇನು ಎಂಬುದೂ ನನಗೆ ಗೊತ್ತಿಲ್ಲ. ಆಸ್ಪತ್ರೆಗೆ ಕರೆದುಕೊಂಡು ಬಂದರು. ಈಗ ಸಂಪೂರ್ಣ ಗುಣಮುಖವಾಗಿ ಬಿಡುಗಡೆಯಾಗಿದ್ದೇನೆ’ ಎಂದು ನಗುಮೊಗದಿಂದಲೇ ಹೇಳಿದರು.
‘ಆಸ್ಪತ್ರೆಯಲ್ಲಿ ಸಮಯಕ್ಕೆ ಸರಿಯಾಗಿ ಬಿಸಿನೀರು, ಗಂಜಿ ಕೊಡುತ್ತಿದ್ದರು. ಇದು ಬಿಟ್ಟರೆ ಬೇರೇನೂ ಸೇರುವುದಿಲ್ಲ. ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಅವರೆಲ್ಲರಿಗೂ ಒಳಿತಾಗಲಿ’ ಎಂದು ಹಾರೈಸಿದರು.