ನಾಯಕನಹಟ್ಟಿ: ತಳಕು ಹೋಬಳಿಯ ಹಿರೇಹಳ್ಳಿ ಗ್ರಾಮದ ಚಿಂತಾಮಣೇಶ್ವರ ದೇವಾಲಯದ ಪಕ್ಕದಲ್ಲಿ ಹಿರೇಹಳ್ಳಿ ಗೆಳೆಯರ ಬಳಗವು ಶುಕ್ರವಾರ ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ.
ಹಿರೇಹಳ್ಳಿ ಗ್ರಾಮದ ಚಿಂತಾಮಣೇಶ್ವರ ವೃತ್ತದಲ್ಲಿ 15 ವರ್ಷಗಳಿಂದಲೂ ಗ್ರಾಮದ ಯುವಕರು ಗಣಪತಿ ಪ್ರತಿಷ್ಠಾಪಿಸುತ್ತಿದ್ದಾರೆ. ಗ್ರಾಮದ ಚಿದಾನಂದ ಮತ್ತು ಗೆಳೆಯರು ತಮ್ಮ ತಮ್ಮಲ್ಲಿಯೇ ಹಣ ಸಂಗ್ರಹಿಸಿ, ಶಾಮಿಯಾನ ಹಾಕಿ, ಪೆಂಡಾಲ್ ನಿರ್ಮಿಸಿ ಮೂರ್ತಿ ಪ್ರತಿಷ್ಠಾಪಿಸಿದ್ದರು. ಇಡೀ ದಿನ ಗ್ರಾಮದ ಮಹಿಳೆಯರು ಮತ್ತು ಮಕ್ಕಳು ಗಣೇಶನ ದರ್ಶನ ಪಡೆದು ಪೂಜೆ ಸಲ್ಲಿಸಿದ್ದರು. ಶನಿವಾರ ನಸುಕಿನ 1 ಗಂಟೆಯವರೆಗೆ ಸ್ನೇಹಿತರು ಸ್ಥಳದಲ್ಲಿಲೇ ಇದ್ದು, ಮನರಂಜನೆ ಕಾರ್ಯಕ್ರಮಗಳನ್ನು
ನಡೆಸಿದ್ದರು.
ನಂತರ ಎಲ್ಲರೂ ಮನೆಗೆ ತೆರಳಿದರು. ಈ ಮಧ್ಯೆ ಸಮೀಪದ ಮನೆಯ ಹಿರಿಯರು ಮಧ್ಯ ರಾತ್ರಿ 2 ಗಂಟೆಯ ಹೊತ್ತಿಗೆ ನೋಡಿದಾಗ ಗಣೇಶ ಮೂರ್ತಿ ಸ್ಥಳದಲ್ಲಿ ಇರಲಿಲ್ಲ. ಆಗ ಸುತ್ತಲಿನ ಮನೆಯವರಿಗೆ ವಿಷಯ ತಿಳಿಸಿದರು. ಸ್ನೇಹಿತರು ಬಂದು ಮೂರ್ತಿ ಹುಡುಕಿದಾಗ ವೇದಿಕೆಯ ಹಿಂಭಾಗದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡು ಬಂದಿದೆ. ನಂತರ ಮೂರ್ತಿಯ ತುಂಡುಗಳನ್ನು ಒಂದೆಡೆ ಸೇರಿಸಿದರು. ಬೆಳಿಗ್ಗೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದರು. ಗಣೇಶನ ಅವಶೇಷಗಳನ್ನು ಮತ್ತು ಗಣೇಶ ಪೆಂಡಾಲ್ ಅನ್ನು ಪೊಲೀಸರು ತೆರವುಗೊಳಿಸಿದರು. ಯಾರೋ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ’ ಎಂದು ಪೊಲೀಸರು ಶಂಕಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ ಸ್ಥಳಕ್ಕೆ ಭೇಟಿ ನೀಡಿ, ‘ಗ್ರಾಮದಲ್ಲಿ ಯಾರಾದರೂ ಕಿಡಿಗೇಡಿಗಳ ಮೇಲೆ ಅನುಮಾನವಿದ್ದರೆ ತಿಳಿಸಬೇಕು. ಸಾರ್ವಜನಿಕರು ಗಣೇಶ ಪ್ರತಿಷ್ಠಾಪನೆಗೆ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಅನುಮತಿ ಪಡೆದಿದ್ದರೆ ಇಂಥ ಘಟನೆಗಳು ನಡೆಯುತ್ತಿರಲಿಲ್ಲ. ಅನುಮತಿ ಪಡೆದ ಕಡೆಗಳಲ್ಲಿ ಮಾತ್ರ ಪೊಲೀಸರು ರಕ್ಷಣೆ ಒದಗಿಸುತ್ತಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.
ಡಿವೈಎಸ್ಪಿ ಕೆ.ವಿ. ಶ್ರೀಧರ್, ಸಿಪಿಐ ರಮಾಕಾಂತ್, ಎಸ್ಐ ಮಾರುತಿ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ಈ ಬಗ್ಗೆ ತಳಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.